ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ ವಿವಾದವಿರಬೇಕು. ಆದರೆ ಹಿಟ್ ಅಂಡ್ ರನ್, ಬೆದರಿಕೆ ಹಾಕುವುದಲ್ಲ. ಕುಮಾರಸ್ವಾಮಿಯ ಬಳಿಯಿರುವ ನನ್ನ ವಿರುದ್ಧದ ದಾಖಲೆ ಜತೆಗೆ ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮದವರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ, ಜನಕ್ಕೆ, ರಾಜ್ಯಕ್ಕೆ ಒಳ್ಳೆಯದು ಮಾಡಿದ್ದರೆ ಅದನ್ನು ದಾಖಲೆ ಸಮೇತ ಬಂದು ಹೇಳಲಿ. ಜನ ಅವರಿಗೆ ಮತ ನೀಡಿ, ದೊಡ್ಡ ಹುದ್ದೆಯನ್ನು ನೀಡಿದ್ದಾರೆ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ.
ಸುಳ್ಳು ಆರೋಪ ಮಾಡಿ, ಬೇರೆಯವರನ್ನು ಹೆದರಿಸುವುದಲ್ಲ. ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ, ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಬಹಿರಂಗ ಚರ್ಚೆಗೆ ಬರಲಿ. ಇದರಲ್ಲಿ ಅವಮಾನ ಆಗುವಂತದ್ದು ಏನೂ ಇಲ್ಲ. ಅವರು ಸಿಎಂ ಆಗಿದ್ದಾಗ ನಾನು ಸಾತನೂರಿಗೆ ಚರ್ಚೆಗೆ ಹೋಗಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಇನ್ನೂ ಬಹಿರಂಗ ಚರ್ಚೆಗೆ ಬಂದಾಗ ನಾನು ಏನು ಮಾಡಿದ್ದೇನೆ, ನನ್ನ ಹುಳುಕು ಏನಿದೆ ಎಂಬುದನ್ನು ನೀನು ಹೇಳು, ನಿನ್ನದು ಏನಿದೆ ಎಂದು ನಾನು ಹೇಳುತ್ತೇನೆ. ನಂತರ ಜನ ತೀರ್ಮಾನ ಮಾಡಲಿ ಎಂದು ಎಚ್ಡಿಕೆಗೆ ಡಿಕೆಶಿ ಸವಾಲೆಸೆದರು.
ಎರಡು ವರ್ಷದ ನಂತರ ಇವರು ಸರ್ಕಾರ ರಚಿಸುವುದು ಇರಲಿ, ಜೆಡಿಎಸ್ 7–8 ಸ್ಥಾನಗಳಿಗೆ ಕುಸಿಯುತ್ತದೆ. ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಹೇಳಿದರು.