ನವದೆಹಲಿ: ಭಾರತದ ವಿರುದ್ಧ ಸಂಘರ್ಷದ ಸಮಯದಲ್ಲಿ ಕದನ ವಿರಾಮಕ್ಕೆ ಮೊದಲು ಮನವಿ ಮಾಡಿದ್ದು ನಾವೇ ಎಂದು ಸ್ವತಃ ಪಾಕಿಸ್ತಾನ ಈಗ ಒಪ್ಪಿಕೊಂಡಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಎರಡು ದಿನಗಳ ಕದನದ ಬಳಿಕ ಎರಡೂ ದೇಶಗಳ ನಡುವೆ ಕದನ ವಿರಾಮವೇರ್ಪಟ್ಟಿತ್ತು.
ಇದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದರು. ನಾನು ಹೇಳಿದ್ದಕ್ಕೇ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿದ್ದವು ಎಂದಿದ್ದರು. ಆದರೆ ಭಾರತ ಮಾತ್ರ ನಾವು ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಅವಕಾಶ ಕೊಡುವುದಿಲ್ಲ. ನೇರವಾಗಿ ಪಾಕಿಸ್ತಾನದಿಂದ ಪ್ರಸ್ತಾಪ ಬಂದಿದ್ದಕ್ಕೇ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿದ್ದರು.
ಇದೀಗ ಸ್ವತಃ ಪಾಕಿಸ್ತಾನವೇ ನಾವೇ ಕದನ ವಿರಾಮಕ್ಕೆ ಆಹ್ವಾನ ನೀಡಿದ್ದು ಎಂದು ಒಪ್ಪಿಕೊಂಡಿದೆ. ಸ್ವತಃ ಪಾಕ್ ಉಪ ಪ್ರಧಾನಿ ಇಶಾಕ್ ದಾರ್ ಇದನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.
ಭಾರತೀಯ ಕ್ಷಿಪಣಿಗಳು ನಮ್ಮ ವಾಯನೆಲೆಗಳನ್ನು ಧ್ವಂಸಗೊಳಿಸಿದಾಗ ಸೌದಿ ಅರೇಬಿಯಾ ಮೂಲಕ ಭಾರತದ ಮನವೊಲಿಸಲು ಪ್ರಯತ್ನ ನಡೆಯಿತು. ನಮ್ಮ ಮೇಲೆ ಭಾರತ ತ್ವರಿತವಾಗಿ ದಾಳಿ ನಡೆಸಿತು. ನಮಗೆ ಯೋಚನೆ ಮಾಡಲೂ ಸಮಯ ಸಿಕ್ಕಿರಲಿಲ್ಲ. ಭಾರತದ ತ್ವರಿತ ದಾಳಿ ನಮಗೆ ಅನಿರೀಕ್ಷಿತವಾಗಿತ್ತು. ಈ ಸಮಯದಲ್ಲಿ ಮೊದಲು ಸೌದಿ ಅರೇಬಿಯಾ ದೊರೆ ಫೈಸಲ್ ಬಿನ್ ಸಲ್ಮಾನ್ ಗೆ ಕರೆ ಮಾಡಿ ಭಾರತದ ಮನವೊಲಿಸಲು ಸಾಧ್ಯವೇ ಎಂದು ಕೇಳಿಕೊಳ್ಳಲಾಯಿತು. ಬಳಿಕ ಅಮೆರಿಕಾ ಬಳಿಯೂ ಮಧ್ಯಸ್ಥಿಕೆಗೆ ಮನವಿ ಮಾಡಿದೆವು ಎಂದು ಅವರು ಹೇಳಿದ್ದಾರೆ.