ಹಿಂದೂ ಹೆಸರಿಟ್ಟುಕೊಂಡಿದ್ದ ಪಾಕಿಸ್ತಾನಿಯರು ಬಂಧನವಾಗಿದ್ದೇ ರೋಚಕ ಕಹಾನಿ

Krishnaveni K

ಮಂಗಳವಾರ, 1 ಅಕ್ಟೋಬರ್ 2024 (11:33 IST)
ಬೆಂಗಳೂರು: ಆನೇಕಲ್ ನಲ್ಲಿ ಹಿಂದೂ ಹೆಸರಿಟ್ಟುಕೊಂಡಿದ್ದ ಪಾಕಿಸ್ತಾನಿ ಮುಸ್ಲಿಮ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಗುರುತು ಪತ್ತೆಯಾಗಿದ್ದರ ಹಿಂದೆ ಚೆನ್ನೈನ ಕನೆಕ್ಷನ್ ಇದೆ.

ಇವರಲ್ಲಿ ಓರ್ವ ಶಂಕರ್ ಶರ್ಮ ಎಂದು ಹೆಸರಿಟ್ಟುಕೊಂಡು ಹಲವು ಸಮಯದಿಂದ ಇಲ್ಲಿ ವಾಸ ಮಾಡುತ್ತಿದ್ದ. 10 ವರ್ಷಗಳ ಹಿಂದೆ ಈತ ಬಾಂಗ್ಲಾ ಮಾರ್ಗವಾಗಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದರು. ಈತನ ಜೊತೆಗೆ ಇನ್ನೂ ಮೂವರಿದ್ದರು. ಇಲ್ಲಿಯೇ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಹಿಂದೂಗಳ ಸೋಗಿನಲ್ಲಿ ಬದುಕುತ್ತಿದ್ದರು.

ಈತನ ಸಹಚರರಿಬ್ಬರು ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಇಲ್ಲಿರುವವರ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಭಾರತಕ್ಕೆ ಬಂದ ಬಳಿಕ ಇಲ್ಲಿನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಎಲ್ಲವನ್ನೂ ಮಾಡಿಸಿಕೊಂಡಿದ್ದರು. ಇವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಡಲು ಸಹಾಯ ಮಾಡಿದವರಿಗಾಗಿ ಈಗ ತಲಾಷ್ ನಡೆದಿದೆ.

ಶಂಕರ್ ಶರ್ಮಾ ಎಂದು ಹೆಸರಿಟ್ಟುಕೊಂಡಿದ್ದವನ ಮೂಲ ಹೆಸರು ರಶೀದ್. ಈತನ ಮನೆ ಶೋಧಿಸಿದಾಗ ಒಳಗೆ ಮುಸ್ಲಿಂ ಬರಹ, ಪುಸ್ತಕಗಳು, ಫೋಟೋಗಳು ಸಿಕ್ಕಿವೆ. ವಿಚಾರಣೆ ನಡೆಸಿದಾಗ ಮನೆಯವರೆಲ್ಲರೂ ಮೂಲತಃ ಪಾಕಿಸ್ತಾನಿಯರು ಎಂದು ಖಚಿತವಾಗಿದೆ. ಇದೀಗ ಜಿಗಣಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ