ಮೋದಿ ಇಲ್ಲದೇ ನಾನಿಲ್ಲ: ಟಿಕೆಟ್ ಗಾಗಿ ಕೊನೆಯ ಪ್ರಯತ್ನದಲ್ಲಿ ಪ್ರತಾಪ್ ಸಿಂಹ ಮಾತು

Krishnaveni K

ಬುಧವಾರ, 13 ಮಾರ್ಚ್ 2024 (10:11 IST)
Photo Courtesy: Twitter
ಬೆಂಗಳೂರು: ಮೈಸೂರಿನಲ್ಲಿ ಈ ಬಾರಿ ಲೋಕಸಭೆ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಪ್ರಧಾನಿ ಮೋದಿ ಬಗ್ಗೆ ಮತ್ತೊಮ್ಮೆ ಹೊಗಳಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಹಿರಿಯ ಸಂಸದ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾದ ಪ್ರತಾಪ್ ಸಿಂಹ ಟಿಕೆಟ್ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ‘ದೆಹಲಿಯಲ್ಲಿ ಈಗಷ್ಟೇ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿ ಒಂದು ಗಂಟೆ ಮಾತುಕತೆ ನಡೆಸಿದೆ. ನಾನು ಈ ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ನರೇಂದ್ರ ಮೋದಿ ಜಿ ಇಲ್ಲದೇ ನಾನೇನೂ ಇಲ್ಲ. ನನಗೆ ಟಿಕೆಟ್ ಸಿಗಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಸಿಗದೇ ಇದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ’ ಎಂದಿದ್ದಾರೆ.

ಅವರ ಈ ಟ್ವೀಟ್ ಗೆ ಹಲವಾರು ಜನ ಕಾಮೆಂಟ್ ಮಾಡಿದ್ದು, ಯಾವುದೇ ಕಾರಣಕ್ಕೂ ನಿಮಗೆ ಟಿಕೆಟ್ ಕೊಡದೇ ಇರಬಾರದು. ನಿಮ್ಮ ಕೆಲಸಗಳನ್ನು ಜನ ಖಂಡಿತಾ ಮರೆಯಲ್ಲ ಎಂದಿದ್ದಾರೆ. ಬೇರೆ ರಾಜ್ಯದವರೂ ಕಾಮೆಂಟ್ ಮಾಡಿ ನಿಮ್ಮನ್ನು ಕೈಬಿಡಬಾರದು ಎಂದು ಬೆಂಬಲಿಸಿದ್ದಾರೆ.

ಟಿಕೆಟ್ ಕೈ ತಪ್ಪುವ ಭೀತಿ ನಡುವೆಯೇ ಫೇಸ್ ಬುಕ್ ಲೈವ್ ಬಂದಿದ್ದ ಪ್ರತಾಪ್ ಸಿಂಹ ಜನರಿಗೆ ಧನ್ಯವಾದ ಸಲ್ಲಿಸಿ ತಮ್ಮನ್ನು ಬೆಳೆಸಿದವರನ್ನು ನೆನೆಸುತ್ತಾ ಕಣ‍್ಣೀರು ಹಾಕಿದ್ದರು. ಪಕ್ಷದಲ್ಲಿ ಅವರ ಪರವಾಗಿ ಎಷ್ಟು ಜನ ಬ್ಯಾಟಿಂಗ್ ಮಾಡುತ್ತಿದ್ದಾರೋ ಇಲ್ಲವೋ ಆದರೆ ಅವರ ಕಟ್ಟಾ ಬೆಂಬಲಿಗರು ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಮಾಡಿಕೊಂಡು ಬೆಂಬಲ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ