ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಬಿಜೆಪಿ ನಾಯಕ

Krishnaveni K

ಭಾನುವಾರ, 10 ಮಾರ್ಚ್ 2024 (10:11 IST)
ಕೋಲ್ಕೊತ್ತಾ: ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪ.ಬಂಗಾಲದ ಕೌಸ್ತವ್ ಬಾಗ್ಚಿ ಎಂಬವರು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪಶ್ಚಿಮ ಬಂಗಾಲ ಉಳಿಸಿ ಎಂದು ಪತ್ರ ಬರೆದಿದ್ದಾರೆ.

ತಮ್ಮ ರಕ್ತದಿಂದ ಪತ್ರ ಬರೆದ ಕೌಸ್ತವ್ ಪ್ರಧಾನಿ ಮೋದಿಯವರೇ ದಯವಿಟ್ಟು ಪಶ್ಚಿಮ ಬಂಗಾಲವನ್ನು ಕಳ್ಳರಿಂದ ರಕ್ಷಿಸಿ ಎಂದು ಬರೆದಿದ್ದಾರೆ. ಆದರೆ ಈ ಪತ್ರವನ್ನು ಸ್ವೀಕರಿಸಿದ ಪ್ರಧಾನಿ ಮೋದಿಯವರು ಇನ್ನು ಮುಂದೆ ಇಂತಹ ಕೆಲಸ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿದ್ದಾಗ ಕೌಸ್ತವ್ ಕಳೆದ ವರ್ಷ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಟೀಕಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದರು. ಬಳಿಕ ಮಮತಾ ಬ್ಯಾನರ್ಜಿ ಸರ್ಕಾರ ಉರುಳಿಸುವವರೆಗೂ ತಲೆ ಕೂದಲು ಬೆಳೆಸಲ್ಲ ಎಂದು ಶಪಥ ಮಾಡಿದ್ದರು. ತೀರಾ ಇತ್ತೀಚೆಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ದೊಡ್ಡ ಸುದ್ದಿಯಾಗಿತ್ತು.

ಕಾಂಗ್ರೆಸ್ ನಲ್ಲಿ ತನಗೆ ಯಾವುದೇ ಗೌರವ ನೀಡುತ್ತಿಲ್ಲ. ಪಶ್ಚಿಮ ಬಂಗಾಲದ ಕಾಂಗ್ರೆಸ್ ಬಗ್ಗೆ ಕೇಂದ್ರ ನಾಯಕರು ನಿರ್ಲ್ಯಕ್ಷ ತೋರಿದ್ದಾರೆ ಎಂದು ಆರೋಪಿಸಿ ಅವರು ಬಿಜೆಪಿ ಸೇರಿದ್ದರು. ಇದೀಗ ಪ್ರಧಾನಿ ಮೋದಿ ಬಂಗಾಲ ಭೇಟಿ ವೇಳೆ ರಕ್ತದಲ್ಲಿ ಬರೆದ ಪತ್ರ ಹಸ್ತಾಂತರಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ