ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗ್ಯಾಂಗ್ ರೇಪ್ ಆರೋಪಿಗಳ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

ಶನಿವಾರ, 28 ಆಗಸ್ಟ್ 2021 (10:33 IST)
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಗುಡ್ಡ ಪ್ರದೇಶದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಆರೋಪಿಗಳ ಪೊಲೀಸರ ವಿಚಾರಣೆ ನಡೆದಿದ್ದು, ಈ ಸಂದರ್ಭದಲ್ಲಿ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿವೆ ಎಂದು ಹೇಳಲಾಗಿದೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದು, ನಾಲ್ವರಲ್ಲ ಬದಲಾಗಿ ಆರು ಮಂದಿ ಆರೋಪಿಗಳು ಎಂದು ಹೇಳಲಾಗಿದ್ದು, ಈ ಪೈಕಿ ಐವರನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಈ ಆರೋಪಿಗಳೆಲ್ಲರೂ ಈ ಹಿಂದೆಯೂ ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಿದ್ದರೆನ್ನಲಾಗಿದ್ದು, ನಿರ್ಜನ ಪ್ರದೇಶಕ್ಕೆ ಬರುವ ಯುವ ಜೋಡಿಯೇ ಇವರ ಟಾರ್ಗೆಟ್ ಎನ್ನಲಾಗಿದೆ. ಈಗ ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಕಳೆದ ಮೂರು ದಿನಗಳಿಂದಲೂ ಈ ಸ್ಥಳಕ್ಕೆ ಬರುತ್ತಿದ್ದುದನ್ನು ಗಮನಿಸಿದ್ದ ಆರೋಪಿಗಳು ಹೊಂಚು ಹಾಕಿ ಆಗಸ್ಟ್ 24 ರಂದು ಅತ್ಯಾಚಾರವೆಸಗಿದ್ದಾರೆ.
ತಮ್ಮ ನೀಚ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು ವಿದ್ಯಾರ್ಥಿನಿಯೊಂದಿಗಿದ್ದ ಆಕೆಯ ಸ್ನೇಹಿತನಿಂದ ಆತನ ತಂದೆಗೆ ಕರೆ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ವೇಳೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಥಳಿಸಿ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದರೆಂದು ಹೇಳಲಾಗಿದೆ.
ಬಳಿಕ ಮೈಸೂರು ನಿವಾಸಿಯಾಗಿರುವ ವಿದ್ಯಾರ್ಥಿನಿ ಸ್ನೇಹಿತನ ತಂದೆ ತಮ್ಮ ಕಾರಿನಲ್ಲಿ ಸ್ಥಳಕ್ಕಾಗಮಿಸಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೆಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಬೈಕಿನಿಂದ ಬಿದ್ದು ಗಾಯಗೊಂಡಿರುವುದಾಗಿ ಹೇಳಿದ್ದರೂ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ