ಅಧಿಕಾರ ಸದುಪಯೋಗದಿಂದ ಜನಪ್ರತಿನಿಧಿಗೆ ಗೌರವ

ಸೋಮವಾರ, 25 ಅಕ್ಟೋಬರ್ 2021 (21:54 IST)
ಬೆಂಗಳೂರು: ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರವು, ಯಾವ ದೆಹಲಿ ನಾಯಕರಿಗೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಚೆಕ್ ಗೆ ಸಹಿ ಮಾಡುವ ಅಧಿಕಾರವನ್ನು ಕೇವಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ಯಾವ ಜನಪ್ರತಿನಿಧಿಗಳಿಗೆ ಇಲ್ಲ ಎಂದರು.
ಅಧಿಕಾರ ಅನ್ನೋದೆ ಸೇವೆ ಮಾಡಲಿಕ್ಕೆ, ‌ಒಂದು ಮೈಕ್ ಮೂಲಕ ನೀರು ಬರುವುದನ್ನು ಜನರಿಗೆ ತಿಳಿಸಬಹುದು. ಜನಸಾಮಾನ್ಯರಿಗೆ ಹತ್ತಿರದಿಂದ ಸಮಸ್ಯೆ ನೋಡಲು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಲು ಉತ್ತಮ ವೇದಿಕೆ ಆಗಲಿದೆ. ಅದನ್ನ ಒಳ್ಳೆಯದಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.
ಗಾಂಧಿಯವರ ಗ್ರಾಮ ಸ್ವರಾಜ್ಯ ಚಿಂತನೆಯನ್ನು ಪಂಡಿತ್ ದೀನದಯಾಳ್ ಅಂತ್ಯೋದಯ ಎಂದರು, ಸರ್ವೋದಯ ಎಂದರೂ ಅದೇ ಆಗಿದೆ. ಗ್ರಾಮ ಪಂಚಾಯತಿಗಳು ಉತ್ತಮ ಗುಣಮಟ್ಟ ನೀಡಿ ಸಮಾಜದ ಮುಖ್ಯವಾಹಿನಿಗೆ ಜನರನ್ನು ತರುವುದೇ ಎಲ್ಲರ ಉದ್ದೇಶ. ಗ್ರಾಮ ಪಂಚಾಯತಿಗಳಲ್ಲಿ ಹೈನುಗಾರಿಕೆ,  ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗೆ ಉತ್ತೇಜನ ಕೊಡಬೇಕು. ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ತೇಜನಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಸ್ವಯಂ ಪ್ರೇರಿತ ನಿರ್ಧಾರಗಳು ಕೈಗೊಳ್ಳಬೇಕು ಎಂದು ತಿಳಿಸಿದರು.
ನಿಮಗಿಂತ ಮೊದಲು ಗ್ರಾಮ ಪಂಚಾಯತಿ ಇತ್ತು. ಆಗಲೂ ಕಾಮಗಾರಿಗಳು ಆಗಿವೆ. ಸ್ವಾತಂತ್ರ್ಯ ಬಂದಾಗಿಂದ ಕಾಮಗಾರಿಗಳು ಆಗಿವೆ. ಆದರೂ, ಇನ್ನೂ ಕೊಳಗೇರಿಗಳಿವೆ, ಹಿಂದುಳಿದ ಗ್ರಾಮಗಳಿವೆ.  ಗ್ರಾಮ ಪಂಚಾಯತಿ ಸದಸ್ಯರು ಬಹುತೇಕ ನಿರ್ಣಾಯಕ ಮತ್ತು ಸ್ಥಳೀಯ ಶಕ್ತಿ. ಗ್ರಾಮ ಪಂಚಾಯತಿಯು ವಿಧಾನ ಪರಿಷತ್, ವಿಧಾನಸಭೆಗೆ ಹೆಬ್ಬಾಗಿಲು ಇದ್ದಂತೆ. ವಿಧಾನ ಪರಿಷತ್ ಪ್ರವೇಶಿಸಲು ಇಚ್ಛೆ ಇರುವವರೇ ಹೆಚ್ಚಾಗಿ ಗ್ರಾಮ ಪಂಚಾಯತಿಗಳನ್ನು ಪ್ರವೇಶಿಸುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಇಂಥವರಿದ್ದಾರೆ. ಕೇವಲ ನಮ್ಮ ಪಕ್ಷದಲ್ಲಿ ಅಲ್ಲ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ