ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಬಂದಿಲ್ಲ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದರೆ ಎರಡು ತಿಂಗಳು ಲೇಟ್ ಆದ್ರೆ ಆಕಾಶ ಏನೂ ತಲೆ ಮೇಲೆ ಬೀಳಲ್ಲ ಅಲ್ವಾ ಎಂದು ಸಚಿವ ಸತೀಶ್ ಜಾರಕಿಹೊಳಿ ಉಡಾಫೆಯ ಉತ್ತರ ನೀಡಿದ್ದಾರೆ. ಇದಕ್ಕೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಆದರೆ ಕೇವಲ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ತಿಂಗಳಾ ತಿಂಗಳು 2 ಸಾವಿರ ರೂ.ಗಳನ್ನು ಸರ್ಕಾರ ಕ್ರೆಡಿಟ್ ಮಾಡುತ್ತದೆ ಎಂದು ವಿಪಕ್ಷಗಳು ಆರೋಪಿಸುತ್ತವೆ.
ಇದಕ್ಕೆ ತಕ್ಕಂತೆ ಗೃಹಲಕ್ಷ್ಮಿ ಹಣ ಒಮ್ಮೆ ಹಾಕಿದರೆ ಮತ್ತೆ ಎರಡು-ಮೂರು ತಿಂಗಳಿಗೆ ಹಾಕುವುದೇ ಇಲ್ಲ. ಈಗ ಗೃಹಲಕ್ಷ್ಮಿ ಹಣ ಕ್ರೆಡಿಟ್ ಆಗಿಲ್ಲ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ಕೇಳಿದಾಗ ಅವರು ನೀಡಿರುವ ಉತ್ತರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗೃಹಲಕ್ಷ್ಮಿಎರಡು ತಿಂಗಳು ಲೇಟ್ ಆದ್ರೆ ಆಕಾಶ ತಲೆ ಮೇಲೆ ಬೀಳಲ್ಲ ಅಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನಿಮಗೆ ಇದು ವಿಷಯ ಅಲ್ಲದೇ ಇರಬಹುದು. ಆದರೆ ಬಡವರಿಗೆ ಇದು ದೊಡ್ಡ ಮೊತ್ತವೇ. ತಿಂಗಳು ತಿಂಗಳು ಕೊಡುತ್ತೇವೆ ಎಂದು ಹೇಳಿ ಈಗ ಮಾತು ತಪ್ಪಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.