ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ: ಆರ್‌ ಅಶೋಕ್‌ ಪ್ರಶ್ನೆ

Sampriya

ಸೋಮವಾರ, 27 ಜನವರಿ 2025 (17:41 IST)
ಬೆಂಗಳೂರು: 2024-25 ನೇ ಆರ್ಥಿಕ ವರ್ಷ ಮುಗಿಯಲು ಇನ್ನು ಕೇವಲ 2 ತಿಂಗಳು ಬಾಕಿ ಉಳಿದಿದ್ದರೂ SCSP/TSP ಯೋಜನೆಯ ಕಾರ್ಯಕ್ರಮಗಳ ಅಡಿಯಲ್ಲಿ ಹಂಚಿಕೆ ಮಾಡಬೇಕಾದ ₹16,429 ಕೋಟಿ ಹಣವನ್ನ ಬಿಡುಗಡೆ ಮಾಡದೆ ಸಈ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವಾಮಿ ಸಚಿವ ಸಿ ಮಹಾದೇವಪ್ಪನವರೇ, ಬರುವ ತಿಂಗಳು 2025-26ನೇ ಸಾಲಿನ ಬಜೆಟ್ ಮಂಡನೆ ಆಗಬೇಕಿದೆ. ಇನ್ನೆರಡು ತಿಂಗಳಲ್ಲಿ ಹೊಸ ಆರ್ಥಿಕ ವರ್ಷ ಜಾರಿಗೆ ಬರಲಿದೆ. ಆದರೆ ಕಳೆದ ವರ್ಷದ ಬಜೆಟ್ ನಲ್ಲಿ ಘೋಷಣೆಯಾದ ಶೇ. 41.46% SCSP/TSP ಅನುದಾನವನ್ನೇ ಇನ್ನೂ ಬಿಡುಗಡೆ
ಮಾಡಿಲ್ಲ ಅಂದರೆ ಅದನ್ನು ಬಿಡುಗಡೆ ಮಾಡುವುದು ಯಾವಾಗ? ಖರ್ಚು ಮಾಡುವುದು ಯಾವಾಗ? ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಸುಮ್ಮನೆ ಕಾಟಾಚಾರಕ್ಕೆ ಬಜೆಟ್ ನಲ್ಲಿ ಘೋಷಣೆ ಮಾಡುವುದಾದರೂ ಯಾತಕ್ಕೆ? ಬಜೆಟ್ ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತಾ?

ಇದೇನಾ ತಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ? ಇದೇನಾ ಸಿದ್ದರಾಮಯ್ಯನವರು ಮತ್ತು ತಾವು ಭಾಷಣ ಬಿಗಿಯುವ ಸಾಮಾಜಿಕ ನ್ಯಾಯ?

ಒಂದು ಕಡೆ ಬಿಡುಗಡೆ ಮಾಡಿರುವ ಅಲ್ಪ ಸ್ವಲ್ಪ ಅನುದಾನವನ್ನ ಲೂಟಿ ಹೊಡೆಯುತ್ತೀರಿ, ಮತ್ತೊಂದು ಕಡೆ ಘೋಷಣೆ ಮಾಡಿದ ಅನುದಾನವನ್ನ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳುತ್ತೀರಿ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ. ತಮಗೆ ಮತ್ತು ತಮ್ಮ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಅನ್ನುವುದು ಇದ್ದರೆ ಇನ್ನು ಮುಂದೆ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ