ಪೋಕ್ಸೊ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಬಗ್ಗೆ ಶೋಭಾ ಪ್ರತಿಕ್ರಿಯಿಸಲು: ಸಿದ್ದರಾಮಯ್ಯ

Sampriya

ಶುಕ್ರವಾರ, 11 ಅಕ್ಟೋಬರ್ 2024 (14:38 IST)
Photo Courtesy X
ಮೈಸೂರು: ಪೋಕ್ಸೊ ಪ್ರಕರಣದಲ್ಲಿ ‌ಸಿಕ್ಕಿಬಿದ್ದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಕೇಂದ್ರ ಸಚಿವೆ‌ ಶೋಭಾ ಕರಂದ್ಲಾಜೆ ಮಾತನಾಡಲಿ ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹೇಳಿದರು.

ಸರ್ಕಾರದ ಜಾಹೀರಾತನ್ನು ಟೀಕಿಸಿದ ಶೋಭಾ ಕರಂದ್ಲಾಜೆ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಯಡಿಯೂರಪ್ಪ ಬಗ್ಗೆ ಮಾತನಾಡಲು ಶೋಭಾ ಅವರಿಗೆ ಹೇಳಿ. ಬಿಜೆಪಿ ಸಂಸದೀಯ ಮಂಡಳಿಯಿಂದ ಯಡಿಯೂರಪ್ಪ ಅವರನ್ನು ತೆಗೆದುಹಾಕಿಸುವಂತೆ ಹೇಳಲಿ. ಅದನ್ನು ಬಿಟ್ಟು ಇಲ್ಲಿಗೆ ಬಂದು ಏನೇನೋ ಹೇಳಿದರೆ? ಎಂದು ಕಿಡಿಕಾರಿದರು.

ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಇದೆ. ನ್ಯಾಯಾಲಯದ ಕೃಪೆಯಿಂದ ಅವರು ಉಳಿದುಕೊಂಡಿದ್ದಾರಷ್ಟೆ. ಇಲ್ಲವಾಗಿದ್ದರೆ ಒಳಗಡೆ ಇರಬೇಕಾಗಿತ್ತು ಎಂದರು.

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ, ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಪುಷ್ಪಾರ್ಚನೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ರಾಜ್ಯದ ಜನರು ಆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಹೆಚ್ಚು ಬಾರಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ದಿನಪತ್ರಿಕೆಗಳಲ್ಲಿ ಸರ್ಕಾರದಿಂದ ನೀಡಿರುವ ಜಾಹೀರಾತಿನ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ದಸರಾ ಎಂದರೇನು? ದುಷ್ಟಶಕ್ತಿಗಳ ಸಂಹಾರ ಹಾಗೂ ಶಿಷ್ಟಜನರ ರಕ್ಷಣೆಯೇ ದಸರಾ. ಅದಕ್ಕಾಗಿಯೇ ವಿಜಯನಗರದ ಅರಸರು ಅವರ ಜಯದ ಸಂಕೇತವಾಗಿ ಮಾಡುತ್ತಿದ್ದರು.‌ ಆಯುಧ ಪೂಜೆ ಮಾಡುತ್ತಿದ್ದರು. ಅದನ್ನು ಮೈಸೂರು ಅರಸರು ಮುಂದುವರಿಸಿದರು. ಇಂದಿಗೂ ಅದೇ ಸಂಪ್ರದಾಯವನ್ನು ಪ್ರಜಾರಾಜ್ಯದಲ್ಲೂ ಉಳಿಸಿಕೊಂಡು ಬರುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ