ಬೆಂಗಳೂರು: ಹೈದರಾಬಾದ್ ನಲ್ಲಿ ಥಿಯೇಟರ್ ನಲ್ಲಿ ಆದ ಕಾಲ್ತುಳಿತಕ್ಕೆ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ ಹಾಗೆ ಇಲ್ಲಿ ಡಿಕೆಶಿ, ಸಿದ್ದರಾಮಯ್ಯನವರನ್ನು ಅರೆಸ್ಟ್ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಪುಷ್ಪ 2 ಸಿನಿಮಾ ರಿಲೀಸ್ ಆದಾಗ ಅಲ್ಲು ಅರ್ಜುನ್ ಥಿಯೇಟರ್ ಭೇಟಿಗೆ ಬಂದಿದ್ದರು. ಅವರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದರು. ಪರಿಣಾಮವಾಗಿ ಓರ್ವ ಮಹಿಳೆ ಸಾವನ್ನಪ್ಪಿದರೆ ಆಕೆಯ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಘಟನೆಗೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಅಲ್ಲು ಅರ್ಜುನ್ ಅವರನ್ನೇ ಹೊಣೆ ಮಾಡಿ ಅರೆಸ್ಟ್ ಮಾಡಿಸಿತ್ತು.
ಇದೀಗ ರಾಜ್ಯದಲ್ಲಿ ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ ವೇಳೆ ಸೂಕ್ತ ಭದ್ರತೆ ನೀಡದೆ ಇಷ್ಟು ಜನರ ಸಾವಿಗೆ ಸರ್ಕಾರವೇ ಹೊಣೆಯಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಗೆ ಮಾಡಿದಂತೆ ಇಲ್ಲಿ ಸಿದ್ದರಾಮಯ್ಯ ಡಿಕೆಶಿಯನ್ನು ಅರೆಸ್ಟ್ ಮಾಡಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಈ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಅವರು ಹೇಳಿದ್ದಾರೆ. ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದಿದ್ದಾರೆ.