ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಬಿ ದಯಾನಂದ್ ಅಮಾನತು ಆದೇಶದ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಭದ್ರತೆ ಬಗ್ಗೆ ತಿಳಿಸಬೇಕಾದವ್ರು ಕಮಿಷನರ್, ಅವ್ರು ತಿಳಿಸಿಲ್ಲ. ಇದರಲ್ಲಿ ನಂದೇನು ತಪ್ಪಿದೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಟಾಂಗ್ ಕೊಟ್ಟಿದ್ದು ಆದೇಶ ಕೊಟ್ಟಿದ್ದು ನೀವೇ ಅಲ್ವಾ ಎಂದಿದ್ದಾರೆ.
ಚಿನ್ನಸ್ವಾಮಿ ಮೈದಾನದ ಬಳಿಕ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ. ಮೃತರ ಕುಟುಂಬಸ್ಥರೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ನಡುವೆ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಸರ್ಕಾರ ಕಮಿಷನರ್ ಬಿ ದಯಾನಂದ್ ಸೇರಿದಂತೆ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿತ್ತು.
ಇದೂ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ರಿಸ್ಕ್ ಇದೆ ಎಂದರೂ ಸಿಎಂ ಕಚೇರಿಯಿಂದಲೇ ಒತ್ತಡ ಬಂದಿತ್ತು ಎಂಬ ಕಾರಣಕ್ಕೆ ಕಾರ್ಯಕ್ರಮ ಆಯೋಜಿಸಲಾಯಿತು. ಹೀಗಿದ್ದಾಗ ಪೊಲೀಸರ ಮೇಲೆ ಕ್ರಮ ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೇ ಸಿಎಂಗೆ ಕೇಳಿದಾಗ ಅವರು ಭದ್ರತೆ ತಿಳಿಸಬೇಕಾದವರು ಕಮಿಷನರ್. ಅವರು ತಿಳಿಸಿಲ್ಲ. ಅದಕ್ಕೇ ಕ್ರಮ ಕೈಗೊಂಡಿದ್ದೇವೆ. ಇದರಲ್ಲಿ ನನ್ನ ತಪ್ಪೇನಿದೆ ಎಂದು ಮರುಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅವರಿಗೆ ಆದೇಶ ನೀಡಿದ್ದು ಸರ್ಕಾರವೇ ಅಲ್ವಾ? ಗುಪ್ತಚರ ಇಲಾಖೆಯೂ ನಿಮ್ಮ ಕೈಯಲ್ಲೇ ಇದೆ. ಹೀಗಿರುವಾಗ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.