ಮೈಸೂರಿನಲ್ಲಿ ವಾಮಾಚಾರಕ್ಕೆ ವಿದ್ಯಾರ್ಥಿ ಬಲಿ

ಮಂಗಳವಾರ, 4 ಜನವರಿ 2022 (17:49 IST)
ಮೈಸೂರು:-ಸ್ನೇಹಿತರೇ ತಮ್ಮ ಗೆಳೆಯನೊಬ್ಬನನ್ನು ಧನುರ್ ಅಮಾವಾಸ್ಯೆ ದಿನದಂದು ವಾಮಾಚಾರಕ್ಕೆಂದು ಬಲಿಕೊಟ್ಟಿರುವ ಬೆಚ್ಚಿ ಬೀಳಿಸುವ ಆಘಾತಕಾರಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಮೈಸೂರಿನ ನಂಜನಗೂಡು ತಾಲೂಕ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಎಂಬುವರ ಪುತ್ರ ಮಹೇಶ್ ಅಲಿಯಾಸ್ ಮನು (16) ಎಂಬಾತನೆ ವಾಮಾಚಾರಕ್ಕೆ ಬಲಿಯಾದ ಬಾಲಕ.
ಧನುರ್ ಮಾಸದ ಅಮಾವಾಸ್ಯ ದಿನದಂದು ಕೆರೆ ಬಳಿ ವಾಮಾಚಾರ ಮಾಡಿದ ಸ್ನೇಹಿತರೇ ಅಮಾಯಕ ಬಾಲಕನನ್ನ ಬಲಿ ಪಡೆದಿದ್ದಾರೆ. ನಂಜನಗೂಡು ತಾಲೂಕು ಹಳೆಪುರ ಗ್ರಾಮದ ಕೆರೆಯಲ್ಲಿ ಬಾಲಕನ ಮೃತದೇಹ ದೊರೆತಿದೆ.
ವಾಮಾಚಾರ ಹೆಸರಲ್ಲಿ ಹತ್ಯೆಗೈದ ಮೂವರು ಸ್ನೇಹಿತರನ್ನು ಕೌಲಂದೆ ಪೊಲೀಸರು ಬಂಧಿಸಿದ್ದಾರೆ.
ಈ ಪೈಕಿ ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತನ್ನ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ. ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ ಇವರಲ್ಲಿ ಗಾಢವಾಗಿತ್ತು.
ಇದೇ ದೃಷ್ಟಿಯಿಂದ ಭಾನುವಾರ ಮಹೇಶ್‌ನನ್ನು ಪುಸಲಾಯಿಸಿದ ಈ ಮೂವರು ಕಿರಾತಕರು, ಕೆರೆ ಬಳಿಗೆ ಕರೆತಂದಿದ್ದಾರೆ. ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ. ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ, ಅದರ ಮೇಲೆ ಮಹೇಶ್ ಹೆಸರು ಬರೆದು, ನಂತರ ಪೂಜೆ ಮಾಡಿದ್ದಾರೆ.
ಪೂಜೆ ನಂತರ ಮಹೇಶ್‌ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ. ಕೃತ್ಯವೆಸಗಿದ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಹೇಶ್ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ.
ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ.ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ. ಗೊಂಬೆ,ಕೋಳಿ,ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ
ಕೌಲಂದೆ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೂವರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ