ಬೆಂಗಳೂರು: ಸುಪ್ರೀಂಕೋರ್ಟ್ ಬಿಬಿಎಂಪಿ ಚುನಾವಣೆ ವಿಷಯವನ್ನು ಇದೇ ನ. 8ರಂದು ಕೈಗೆತ್ತಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರುವ ಜ. 13ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುತ್ತಿದ್ದು, ನ.8ರಂದು ಕರಡು ಮತಪಟ್ಟಿ ಪ್ರಕಟಗೊಳ್ಳಲಿದೆ. ಆದ್ದರಿಂದ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪಾಲಿಕೆ ವಿಶೇಷ ಆಯುಕ್ತ ಕೆ.ಎ.ದಯಾನಂದ್ ಹೇಳಿದರು.
ಮತದಾರರು ಪರಿಷ್ಕರಣೆ ಕಾರ್ಯದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು ಮತ್ತು NVSP ಪೋರ್ಟಲ್ (www.nsvp.in), (www.voterportal.eci.gov.in) ಮತ್ತು 1950 ವೋಟರ್ ಹೆಲ್ಪ್ ಲೈನ್ ಮುಖಾಂತರ ನೋಂದಾಯಿಸಬಹುದು ಎಂದು ಹೇಳಿದರು.
ನಗರ ಯೋಜನೆ ಶುಲ್ಕ ಪ್ರಾರಂಭ: ಬಿಬಿಎಂಪಿಗೆ ನಗರ ಯೋಜನೆ ಶುಲ್ಕ ವಿಚಾರ ಕೋರ್ಟ್ ಆದೇಶದಿಂದ ಗೊಂದಲ ಉಂಟಾಗಿರುವುದರಿಂದ ನಗರ ಪಾಲಿಕೆ ತೀವ್ರ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂದೋದಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಬಿಎಂಪಿ ಕಡತವನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಸಮಾರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಶುಲ್ಕ ಪಡೆಯಲು ಪ್ರಾರಂಭಿಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.
ರಸ್ತೆ, ಚರಂಡಿ ದುರಸ್ಥಿ: ಮುಖ್ಯಮಂತ್ರಿಗಳ ನಿರ್ದೇಶನದಂತೆ ರಸ್ತೆ ಮತ್ತು ಚರಂಡಿಗಳನ್ನು ದುರಸ್ಥಿ ಮಾಡುವ ಕಾರ್ಯ ಸಮಾರೋಪಾದಿಯಲ್ಲಿ ನಡೆಸಲಾಗುತ್ತಿದೆ. ವಾರ್ಡ್ ಮಟ್ಟದಲ್ಲೂ ಸಹ ಸಮಸ್ಯೆಗಳ ಚರ್ಚೆ ಆಗುತ್ತಿದೆ. ಪ್ರತಿ ವರ್ಷ 70 ರಿಂದ 80 ಕಿಲೋ ಮಿಟರ್ ಹೊಸದಾಗಿ ನಿರ್ಮಾಣ ಮಾಡುತ್ತಾ ಇದ್ದೇವೆ. ನಗರದ ಮಧ್ಯ ಭಾಗದಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ರಾಜಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು ಗೌರವ್ ಗುಪ್ತ ಹೇಳಿದರು.