ಮಠಗಳ ನಿಯಂತ್ರಣ ವಿಷಯ ಮೇಲ್ಮನೆಯಲ್ಲಿ ಪ್ರಸ್ತಾಪ, ಬಿಜೆಪಿ– ಜೆಡಿಎಸ್ ಸಭಾತ್ಯಾಗ

ಗುರುವಾರ, 8 ಫೆಬ್ರವರಿ 2018 (15:00 IST)
ಮಠ-ಮಂದಿರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮೇಲ್ಮನಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಸಭಾತ್ಯಾಗ ನಡೆಸಿದರು.
 
ಧಾರ್ಮಿಕ ಕೇಂದ್ರಗಳನ್ನು ಹತೋಟಿಗೆ ತರಲು ಸರ್ಕಾರ ಹೊರಡಿಸಿರುವ ಸುತ್ತೋಲೆ ಮೇಲ್ಮನೆಯಲ್ಲಿ ಪ್ರಸ್ತಾಪಕ್ಕೆ ಬಂದು ಆರೋಪ– ಪ್ರತ್ಯಾರೋಪ ನಡೆಯಿತು.
 
ನಿಲುವಳಿ ಸೂಚನೆ ಪ್ರಸ್ತಾಪದಡಿ ಮಾತನಾಡಿದ ಈಶ್ವರಪ್ಪ, ಸರ್ಕಾರ ಮಠಗಳನ್ನು ನಿಯಂತ್ರಣ ಮಾಡಲು ಹೊರಟಿರುವುದನ್ನು ಖಂಡಿಸಿ, ತೀವ್ರ ತರಾಟೆ ತೆಗೆದುಕೊಂಡರು. ಮಠಗಳು ದೇವಾಲಯಗಳು ಇದ್ದಂತೆ, ಮಠಾಧೀಶರು ದೇವರಿದ್ದಂತೆ ಸಮಾಜ ಸೇವೆಯಲ್ಲಿ ತೊಡಗಿರುವ ಮಾಡುವವರ ಮೇಲೆಯೂ ಕಣ್ಣಿಡುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಠಗಳನ್ನು ನಿಯಂತ್ರಣ ಮಾಡುವ ಉದ್ದೇಶವಿಲ್ಲ. ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು.
 
ಸರ್ಕಾರದೀ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದೆ ಎಂದು ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸ್ವಾಮೀಜಿಗಳಿಗೆ ಆಘಾತವಾಗಿಲ್ಲ. ಬಿಜೆಪಿಯವರಿಗೆ ರಾಜಕೀಯವಾಗಿ ಆಘಾತವಾಗಿದೆ. ನೀವು ಮಾಡಿದ್ದರೆ ಹಿಂದೂಪರ, ನಾವು ಮಾಡಿದರೆ ಹಿಂದೂ ವಿರೋಧ ಎಂದು ಹೇಳಿದರು.
 
ಇದನ್ನು ಒಪ್ಪದ ಬಿಜೆಪಿ ಸದಸ್ಯರು, ಈ ಹಂತದಲ್ಲಿ ಸರ್ಕಾರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು. ಮಠಾಧೀಶರಿಗೆ ಆತಂಕವಾಗಿದ್ದು, ಆತಂಕವನ್ನು ದೂರ ಮಾಡುವ ಸಲುವಾಗಿ ಸಭಾತ್ಯಾಗ ಮಾಡುವುದಾಗಿ ಜೆಡಿಎಸ್‌ನ ಶ್ರೀಕಂಠೇಗೌಡ ತಿಳಿಸಿ ಸದಸ್ಯರೊಂದಿಗೆ ಹೊರನಡೆದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ