ಮಳೆ ಬಂದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ, ದೈನಂದಿನ ಬಳಕೆಯ ತರಕಾರಿ ಬೆಲೆ ಎಷ್ಟಿದೆ

Krishnaveni K

ಗುರುವಾರ, 13 ಜೂನ್ 2024 (10:49 IST)
ಬೆಂಗಳೂರು: ಬೇಸಿಗೆಯಲ್ಲಿ ನೀರಿಲ್ಲದ ಕಾರಣ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿತ್ತು. ಆದರೆ ಈಗ ಮಳೆ ಬಂದರೂ ತರಕಾರಿ ಬೆಲೆ ಮಾತ್ರ ಬೆಂಗಳೂರಿನಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಈ ಬಾರಿ ಕೆಲವೆಡೆ ಅತಿಯಾದ ಮಳೆಯಾಗಿ ಬೆಳೆ ಹಾನಿಯಾಗಿದೆ. ಹೀಗಾಗಿ ತರಕಾರಿ ಬೆಲೆ ಮತ್ತೆ ಏರಿಕೆಯಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆಯೇ ಬೀನ್ಸ್ ಬೆಲೆ 200 ರ ಗಡಿ ದಾಟಿತ್ತು. ಕ್ಯಾರೆಟ್, ಬಟಾಣಿ ಬೆಲೆಯೂ 150 ರ ಗಡಿ ದಾಟಿತ್ತು. ಈಗಿನ ಪ್ರಕಾರ ಬೀನ್ಸ್ ಕೊಂಚ ಇಳಿಕೆಯಾದರೂ ನವಿಲುಕೋಸು,  ಬಟಾಣಿ ಬೆಲೆ 100 ಕ್ಕಿಂತೂ ಹೆಚ್ಚೇ ಇದೆ.

ದೈನಂದಿನವಾಗಿ ಹೆಚ್ಚಾಗಿ ಬಳಕೆಯಾಗುವ ಬೀನ್ಸ್ ,ಕ್ಯಾರೆಟ್, ಬಟಾಣಿ, ಟೊಮೆಟೊ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. 200 ರ ಗಡಿ ದಾಟಿದ್ದ ಬೀನ್ಸ್ 100 ರೊಳಗೆ ಬಂದು ನಿಂತಿತ್ತು. ಆದರೆ ಈಗ 80-100 ರವರೆಗೆ ಬಂದಿದೆ. ಇದ್ದಿದ್ದರಲ್ಲಿ ಬೆಂಡೆಕಾಯಿ ಮಾತ್ರ ಇಳಿಕೆಯಾಗಿದ್ದು ಸದ್ಯಕ್ಕೆ 30 ರೂ.ವರೆಗೆ ಬಂದು ನಿಂತಿದೆ.

ಕ್ಯಾರಟ್ 80 ರೂ., ನವಿಲುಕೋಸು 100 ರೂ., ದಪ್ಪ ಮೆಣಸಿನಕಾಯಿ 60-70 ರೂ., ಟೊಮೆಟೊ 50 ರೂ., ಆಲೂಗಡ್ಡೆ 40 ರೂ.ವರೆಗೆ ಬಂದು ನಿಂತಿದೆ. ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದೆ. ಹೀಗಾಗಿ ಈಗ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ