ಬೆಂಗಳೂರು: ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ನಮ್ಮ ತಂದೆ ಗ್ರೇಟ್ ಎಂದಿದ್ದ ಸಿಎಂ ಪುತ್ರ, ಎಂಎಲ್ ಸಿ ಡಾ ಯತೀಂದ್ರ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ, ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದಿದ್ದಾರೆ.
ಮೈಸೂರಿನ ಅಭಿವೃದ್ಧಿ ವಿಚಾರದಲ್ಲಿ ನಮ್ಮ ತಂದೆಯವರ ಕೊಡುಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ಹೆಚ್ಚು ಎಂದು ಮಾಧ್ಯಮಗಳ ಮುಂದೆ ಡಾ ಯತೀಂದ್ರ ಹೇಳಿಕೆ ನೀಡಿದ್ದರು. ಆದರೆ ಅವರ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ವಿಪಕ್ಷಗಳು ಯತೀಂದ್ರ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿವೆ.
ಇದೀಗ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೇ ಯತೀಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರಂತೆ ನನ್ನ ತಂದೆಯವರೂ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದ್ದೆ. ಆದರೆ ಬಿಜೆಪಿಯವರು ಅದನ್ನು ತಿರುಚಿದ್ದಾರೆ. ನಮ್ಮ ತಂದೆಯವರು ಏನು ಮಾಡಿದ್ದಾರೆ ಎಂಬುದಕ್ಕೆ ಅಂಕಿ ಅಂಶಗಳು ಸಾಕ್ಷಿ ಇದೆ. ಕ್ಷಮೆ ಕೇಳುವ ಅಗತ್ಯವೇ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ.
ಯತೀಂದ್ರ ಹೇಳಿಕೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಕೂಡಾ ತಿರುಗೇಟು ನೀಡಿದ್ದರು. ಜನರು ಅಧಿಕಾರ ಕೊಟ್ಟಿದ್ದಾರೆ. ಜನಪರ ಕೆಲಸಗಳನ್ನು ಮಾಡಿ. ಅದು ಬಿಟ್ಟು ಅವರಿಗಿಂತ ನಾನು ಹೆಚ್ಚು ಎಂದು ಹೇಳಿಕೆ ಕೊಡಬೇಡಿ. ಮಹಾರಾಜರು ನಾಡಿಗೆ ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತು ಎಂದಿದ್ದರು.