ನಾಟಕ ನಂಬಲು ಯುವಕರು ಮೂರ್ಖರಲ್ಲ : ಗುಂಡೂರಾವ್

ಶುಕ್ರವಾರ, 17 ಜೂನ್ 2022 (13:51 IST)
ಬೆಂಗಳೂರು : ಸರ್ಕಾರ ಪ್ರಾರಂಭಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.
 
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಸೇನೆಯ ಅಲ್ಪಾವಧಿ ನೇಮಕ ಯೋಜನೆ ‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೆದ್ದಿದೆ. ಯುವಕರ ಆಕ್ರೋಶ ಸಹಜವಾದದ್ದೆ. ಕಳೆದ ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ.

ಈಗ ಅಗ್ನಿಪಥ್ ಯೋಜನೆಯ ಮೂಲಕ ನೇಮಕಾತಿಯಾದರೂ ಅದು ಅಲ್ಪಾವಧಿಯಷ್ಟೆ. ಕೇವಲ ನಾಲ್ಕು ವರ್ಷಕ್ಕೆ ಕಡ್ಡಾಯ ನಿವೃತ್ತಿಯಾಗಬೇಕು. ಆ ನಂತರ ಯುವಕರ ಭವಿಷ್ಯವೇನು ಎಂದು ಪ್ರಶ್ನಿಸಿದ್ದಾರೆ. 

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವುದೇ ಬಡ ಮಧ್ಯಮ ವರ್ಗದ ಯುವಕರು. ಹೊಟ್ಟೆ ತುಂಬಿದ ಶ್ರೀಮಂತರ ಮಕ್ಕಳಾಗಲಿ, ನಕಲಿ ದೇಶಪ್ರೇಮದ ಭಾಷಣ ಬಿಗಿಯುವ ಸಂಘ ಪರಿವಾರದ ಹೆತ್ತ ಕುಡಿಗಳಾಗಲಿ ಸೈನ್ಯ ಸೇರುವುದಿಲ್ಲ. ಇದು ಕಟು ವಾಸ್ತವ. ಸೈನ್ಯಕ್ಕೆ ಸೇರಿದ ಬಡ ಮಧ್ಯಮ ವರ್ಗದ ಯುವಕರಿಗೆ ಸೇವಾ ಭದ್ರತೆ ಅತಿ ಅಗತ್ಯ. ಇದನ್ನು ಕೇಂದ್ರ ಅರಿಯಬೇಕು ಎಂದಿದ್ದಾರೆ.

ಅಗ್ನಿಪಥ್ ಯೋಜನೆ ಮೂಲಕ ಸೇನೆಯಲ್ಲಿ ಕಾಲ್ಪನಿಕ ಹುದ್ದೆ ಸೃಷ್ಟಿಸುವುದು ಈ ನಾಟಕದ ಒಂದು ಭಾಗ. ಆದರೆ ಮೋದಿಯವರ ಈ ನಾಟಕ ನಂಬಲು ಯುವಕರು ಮೂರ್ಖರಲ್ಲ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ