ತಪ್ಪು ಮಾಡಿದ್ದಕ್ಕೇ ದರ್ಶನ್ ಜೈಲಿಗೆ ಹೋಗಿದ್ದು: ಜಮೀರ್ ಅಹ್ಮದ್ ಬದಲಾದ ವರಸೆ

Krishnaveni K

ಮಂಗಳವಾರ, 3 ಸೆಪ್ಟಂಬರ್ 2024 (15:24 IST)
Photo Credit: Facebook
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಸಚಿವ ಜಮೀರ್ ಅಹ್ಮದ್ ನಡುವಿನ ಗೆಳೆತನ ಎಲ್ಲರಿಗೂ ಗೊತ್ತೇ ಇದೆ. ಆದರೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದ್ದು, ಅದಾದ ಬಳಿಕ ಜಮೀರ್ ವರಸೆಯೇ ಬದಲಾಗಿದೆಯಾ ಎಂಬ ಅನುಮಾನ ಮೂಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇದ್ದಾಗ ಅವರಿಗೆ ರಾಜಾತಿಥ್ಯ ನೀಡಲು ಪ್ರಭಾವಿ ಸಚಿವರೊಬ್ಬರೇ ಅನುಕೂಲ ಮಾಡಿಕೊಟ್ಟಿದ್ದರು ಎಂಬ ಮಾತುಗಳಿತ್ತು. ಆಗ ಎಲ್ಲರ ಗಮನ ಜಮೀರ್ ಮೇಲೆಯೇ ಹರಿದಿತ್ತು. ಇದಕ್ಕೆ ಮೊದಲು ದರ್ಶನ್ ಬಂಧನವಾದಾಗ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಬಂದಾಗಲೂ ಜಮೀರ್ ಮೇಲೆಯೇ ಎಲ್ಲರ ಅನುಮಾನವಿತ್ತು.

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ  ಖಡಕ್ ವಾರ್ನಿಂಗ್ ಕೊಟ್ಟಿದ್ದರು ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ತಲೆ ಹಾಕಲು ಹೋಗಬೇಡಿ. ಇದರಿಂದ ನಿಮಗೇ ತೊಂದರೆಯಾಗಬಹುದು ಎಂದಿದ್ದರು. ಹೀಗಾಗಿ ಇಂದು ಮಾಧ್ಯಮಗಳು ದರ್ಶನ್ ಪ್ರಕರಣದ ಬಗ್ಗೆ ಕೇಳಿದಾಗ ಜಮೀರ್ ವರಸೆ ಬದಲಿಸಿದ್ದಾರೆ.

‘ನನ್ನ ದರ್ಶನ್ ನಡುವೆ ಗೆಳೆತನವಿರುವುದು ನಿಜ. ಹಾಗಂತ ಈ ವಿಚಾರದಲ್ಲಿ ನಾನು ತಲೆ ಹಾಕಲು ಹೋಗಿಲ್ಲ’ ಎಂದಿದ್ದಾರೆ. ಇನ್ನು, ದರ್ಶನ್ ತಪ್ಪು ಮಾಡಿದ್ದಾರೆ ಎನಿಸುತ್ತದೆಯೇ ಎಂದು ಕೇಳಿದಾಗ ‘ಹೌದು, ತಪ್ಪು ಮಾಡಿದ್ದಕ್ಕೇ ಜೈಲಿನಲ್ಲಿದ್ದಾರೆ’ ಎಂದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ