ಉ.ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆಜಂಖಾನ್ ಜೈಲಿಗೆ: ಬಿಜೆಪಿ

ಬುಧವಾರ, 12 ಅಕ್ಟೋಬರ್ 2016 (14:23 IST)
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಬಂದಲ್ಲಿ ಸಚಿವ ಆಜಂಖಾನ್‌ನನ್ನು ಜೈಲಿಗೆ ತಳ್ಳಲಾಗುವುದು ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.
 
ಸಾರ್ದಾನಾ ವಿಧಾನಸಭೆ ಕ್ಷೇತ್ರದ ಶಾಸಕರಾದ ಸಂಗೀತ್ ಸೋಮ್ ಮಾತನಾಡಿ, ಸಚಿವ ಆಜಂಖಾನ್ ಹಲವಾರು ಬಾರಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ದೇಶದ ಪ್ರಧಾನಿಯಾಗುವ ಕನಸನ್ನು ಹೊತ್ತಿರುವ ಖಾನ್, ಭಾರತ ಮಾತೆಯನ್ನು ದೆವ್ವ ಎಂದು ಜರಿದಿದ್ದಾರೆ. ಇಂತಹ ವ್ಯಕ್ತಿಗಳ ಯೋಗ್ಯತೆ ತೋರಿಸಲು ಪ್ರತಿಯೊಬ್ಬರು ಒಂದಾಗಿ ಎಂದು ಕರೆ ನೀಡಿದ್ದಾರೆ. 
 
ಸಚಿವ ಆಜಂ ನಮ್ಮ ಸಹೋದರ, ಸಹೋದರಿಯರ ಬಗ್ಗೆ ಜೋಕ್ ಮಾಡುತ್ತಾ ಅವಹೇಳನ ಮಾಡುತ್ತಿದ್ದಾರೆ. ತಮಗೆ ಜೀವ ಬೆದರಿಕೆಯಿದೆ ಎಂದು ಹೇಳುತ್ತಾರೆ. ಆದರೆ, ನಿಜವಾಗಿ ಭೂಮಾತೆಗೆ ಇಂತಹ ಹೇಡಿಗಳಿಂದ ಜೀವ ಬೆದರಿಕೆಯಿದೆ ಎಂದು ತಿರುಗೇಟು ನೀಡಿದ್ದಾರೆ.
 
ಒಂದು ವೇಳೆ, ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಗುಂಡಾಗಿರಿ, ಕೆಟ್ಟ ರಾಜಕೀಯ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ