ಅರ್ನಬ್ ಗೋಸ್ವಾಮಿ ವಿರುದ್ಧ ಬರ್ಖಾ ದತ್ ಕಿಡಿ

ಗುರುವಾರ, 28 ಜುಲೈ 2016 (07:18 IST)
ಹುಸಿ ಜಾತ್ಯಾತೀತವಾದಿ ಮತ್ತು ಪಾಕಿಸ್ತಾನ ಪರ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ ಟೈಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಎನ್‍ಡಿಟಿವಿ ಕನ್ಸಲ್ಟಿಂಗ್ ಎಡಿಟರ್ ಬರ್ಖಾ ದತ್ ಕಿಡಿಕಾರಿದ್ದಾರೆ.

ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ವಿಶೇಷ ಸಂದರ್ಭದಲ್ಲಿ ತಾವು ನಡೆಸಿಕೊಟ್ಟ ನ್ಯೂಸ್ ಅವರ್ ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ ತಮ್ಮ ಪ್ರತಿಸ್ಪರ್ಧಿ ಸುದ್ದಿವಾಹಿನಿಗಳ ಪತ್ರಕರ್ತರನ್ನು 'ಪಾಕಿಸ್ತಾನ ಪರ ಪಾರಿವಾಳಗಳು' ಎಂದು ಟೀಕಿಸಿದ್ದರು. ಈ ಆರೋಪಕ್ಕೆ ಕೆರಳಿರುವ ಬರ್ಖಾ ದತ್ ತಮ್ಮ ಫೇಸ್‍ಬುಕ್ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.

ನಮ್ಮದೇ ಕ್ಷೇತ್ರದಲ್ಲಿರುವ ಪತ್ರಕರ್ತರ ಬಾಯಿ ಮುಚ್ಚಿಸಬೇಕು, ಅವರನ್ನು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕಂತೆ. ಈ ಮನುಷ್ಯ ಪತ್ರಕರ್ತನೇನು? ಆತನದೇ ಕ್ಷೇತ್ರದಲ್ಲಿ ನಾನು ಕೂಡ ಕೆಲಸ ಮಾಡುತ್ತಿರುವೆ ಎಂದು ಹೇಳಲು ನಾಚಿಕೆಯಾಗುತ್ತಿದೆ. ಪಾಕ್ ಪರ ಪಾರಿವಾಳಗಳ ಬಗ್ಗೆ ಮಾತನಾಡುವವರು ಸರ್ಕಾರದ ಬಗ್ಗೆ ಏಕೆ ಮೌನ ವಹಿಸಿರುವುದು. ಸರ್ಕಾರದ ಚಮಚಾಗಿರಿ ಮಾಡುತ್ತಿದ್ದಾರೆಯೇ? ಬಿಜೆಪಿ ಮತ್ತು ಪಿಡಿಪಿ, ಪಾಕಿಸ್ತಾನ ಮತ್ತು ಹುರಿಯತ್ ಜತೆ ಮಾತುಕತೆ ನಡೆಸಿದಾಗ ಅರ್ನಬ್ ಸುಮ್ಮನಿದ್ದದ್ದು ಯಾಕೆ? ಎಂದು ಬರ್ಖಾ ಪ್ರಶ್ನಿಸಿದ್ದಾರೆ.

ತಮ್ಮನ್ನು ಐಎಸ್ಐ ಏಜೆಂಟ್ ಎಂದು ಜರಿದರೂ ಸುಮ್ಮನಿರುವ ಮಾಧ್ಯಮಗಳ ಬಗ್ಗೆ ಅವರು ಅಸಹನೆ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ