ಪಾಕಿಸ್ತಾನವನ್ನೇ ಧ್ವಂಸಗೊಳಿಸುವ ಸಾಮರ್ಥ್ಯ ಭಾರತಕ್ಕಿದೆ: ಖಾನ್ ಹೇಳಿಕೆಗೆ ತಿರುಗೇಟು

ಸೋಮವಾರ, 30 ಮೇ 2016 (12:45 IST)
ಪಾಕಿಸ್ತಾನ ದೆಹಲಿಯನ್ನು ಕೇವಲ ಐದೇ ನಿಮಿಷದಲ್ಲಿ ಧ್ವಂಸಗೊಳಿಸುವ ತಾಕತ್ತು ಹೊಂದಿದೆ ಎಂದು ಪಾಕಿಸ್ತಾನದ ಪರಮಾಣು ಪಿತಾಮಹ ಡಾ.ಅಬ್ದುಲ್ ಖಾದೀರ್ ಖಾನ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎನ್‌,ಸಿ.ವಿಜ್, ಭಾರತಕ್ಕೆ ಸಂಪೂರ್ಣ ಪಾಕಿಸ್ತಾನವನ್ನು ಟಾರ್ಗೆಟ್ ಮಾಡುವ ಸಾಮರ್ಥ್ಯವಿದೆ ಎಂದು ಗುಡುಗಿದ್ದಾರೆ.
ಪಾಕಿಸ್ತಾನದ ಪರಮಾಣು ಪರೀಕ್ಷೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖಾನ್, ರಾವಲ್ಪಿಂಡಿಯ ಕಹುಟಾ ಪ್ರದೇಶದಿಂದ  ದೆಹಲಿಯ ಮೇಲೆ ಐದು ನಿಮಿಷದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೆ ನೀಡಿದ್ದರು. 
 
ಭಾರತದ ಮಾಜಿ ಸೇನಾ ಮುಖ್ಯಸ್ಥ ವಿಜ್ ಮಾತನಾಡಿ, ಭಾರತಕ್ಕೆ ಸಂಪೂರ್ಣ ಪಾಕಿಸ್ತಾನವನ್ನು ಧ್ವಂಸಗೊಳಿಸುವ ಸಾಮರ್ಥ್ಯವಿದೆ. ಆದರೆ, ಪರಮಾಣು ಅಸ್ತಗಳನ್ನು ನಾಗರಿಕ ಹಿತಾಸಕ್ತಿಗಾಗಿ ಬಳಸಬೇಕೇ ಹೊರತು ದಾಳಿ ನಡೆಸಲು ಅಲ್ಲ ಎಂದಿದ್ದಾರೆ.
 
ಪಾಕಿಸ್ತಾನದ ಸೇನಾ ಮುಖ್ಯಸ್ಥ ನಾಳೆ ಪರಮಾಣು ದಾಳಿ ನಡೆಸುವಂತೆ ಪಾಕ್ ಸೇನೆಗೆ ಆದೇಶ ನೀಡಿದರೂ. ಪರಮಾಣು ದಾಳಿಗೆ ಸಿದ್ದವಾಗಲು ಕನಿಷ್ಠ ಆರು ಗಂಟೆಗಳು ಬೇಕಾಗುತ್ತವೆ ಎಂದು ತಿಳಿಸಿದ್ದಾರೆ. 
 
ಇರಾನ್, ಸಿರಿಯಾ ಮತ್ತು ಉತ್ತರ ಕೊರಿಯಾ ದೇಶಗಳಿಗೆ ರಹಸ್ಯವಾಗಿ ಪರಮಾಣ ರಹಸ್ಯಗಳನ್ನು ಕಾನೂನುಬಾಹಿರವಾಗಿ ರವಾನಿಸಿದ್ದಾರೆ ಎನ್ನುವ ಆರೋಪ ಹೊತ್ತಿರುವ ಖಾದೀರ್ ಖಾನ್, 1998ರಲ್ಲಿ ತಮ್ಮ ಮೇಲ್ವಿಚಾರಣೆ ನಡೆದ ಪರಮಾಣು ವಾರ್ಷಿಕ ಆಚರಣೆ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿದರು.
 
ಪಾಕಿಸ್ತಾನ 1984ರಲ್ಲಿಯೇ ಪರಮಾಣ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಆದರೆ, ಅಂದಿನ ರಾಷ್ಟ್ರಾಧ್ಯಕ್ಷ ಜನರಲ್ ಜಿಯಾ ಉಲ್ ಹಕ್ ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ.
 
ಒಂದು ವೇಳೆ ಪರಮಾಣು ಪರೀಕ್ಷೆ ನಡೆಸಿದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಸೇನಾ ಕಾರ್ಯಾಚರಣೆ ನಡೆಸಬಹುದು ಎನ್ನುವ ಆತಂಕ ಜಿಯಾ ಅವರನ್ನು ಕಾಡುತ್ತಿತ್ತು ಎಂದು ಹೇಳಿದ್ದಾರೆ.
 
ಪಾಕಿಸ್ತಾನ ದೇಶಕ್ಕೆ ಪರಮಾಣ ಕೊಡುಗೆ ಕೊಟ್ಟ ನನಗೆ ಗೌರವಕ್ಕೆ ಬದಲು ಅಪಮಾನವೇ ದೊರೆತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪಾಕ್ ಸರಕಾರ ಖಾದಿರ್ ಅವರಿಗೆ ಸಣ್ಣ ಮನೆಯೊಳಗೆ ವಾಸಿಸುವಂತೆ ಒತ್ತಡ ಹೇರಿದ್ದಲ್ಲದೇ ಯಾರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ