ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?

ಭಾನುವಾರ, 10 ಅಕ್ಟೋಬರ್ 2021 (11:05 IST)
ನವದೆಹಲಿ : ದೇಶದಲ್ಲಿ ದೆಹಲಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ವಾಡಿಕೆಗಿಂತಲೂ ಹೆಚ್ಚಾಗಿರುವ ಮಳೆ ಕಲ್ಲಿದ್ದಲು ಪೂರೈಕೆ ಮೇಲೆ ಪರಿಣಾಮ ಬೀರಿರುವುದು, ಆಮದು ಕಲ್ಲಿದ್ದಲು ಅವಲಂಬಿಸಿದ್ದ ಸ್ಥಾವರಗಳು ಕಲ್ಲಿದ್ದಲು ದರ ಏರಿಕೆಯಿಂದಾಗಿ ಉತ್ಪಾದನೆ ಕಡಿತಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.

ಕಲ್ಲಿದ್ದಲು ಉತ್ಪಾದನೆ ತೃಪ್ತಿಕರವಾಗಿದ್ದರೂ ಮಳೆಯಿಂದಾಗಿ ಸರಬರಾಜು ವ್ಯತ್ಯಯವಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡಿನಲ್ಲಿ ವಿದ್ಯುತ್ ಸಮಸ್ಯೆ ತೋರುವ ಸೂಚನೆಗಳು ಇವೆ.
ಇರುವ ಕಲ್ಲಿದ್ದಲು ದಾಸ್ತಾನು ಒಂದೆರಡು ದಿನಗಳಿಗೆ ಸಾಕಾಗಬಹುದು. ಹೀಗಾಗಿ, ವಿದ್ಯುತ್ ಉತ್ಪಾದನೆ ಸ್ಥಗಿತವಾಗಬಹುದು ಎಂಬ ಎಚ್ಚರಿಕೆಯನ್ನು ವಿವಿಧ ಖಾಸಗಿ ಶಾಖೋತ್ಪನ್ನ ಸ್ಥಾವರಗಳ ಅಧಿಕಾರಿಗಳು, ಪೂರೈಕೆದಾರರು ನೀಡಿದ್ದಾರೆ.
ಆದರೆ, ಕಲ್ಲಿದ್ದಲು ಸಚಿವಾಲಯವು ದೇಶದಲ್ಲಿ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ ಎಂದು ಹೇಳಿದ್ದು, ಪೂರ್ಣವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಲಿದೆ ಎಂಬ ಆತಂಕಕ್ಕೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ