ರೈತರ ಹಿತಾಸಕ್ತಿ ಕಾಪಾಡಲು ನಷ್ಟ ಎದುರಿಸಲೂ ಸಿದ್ಧ: ಟ್ರಂಪ್ ಗೆ ಎಚ್ಚರಿಕೆ ನೀಡಿದ ಮೋದಿ

Krishnaveni K

ಗುರುವಾರ, 7 ಆಗಸ್ಟ್ 2025 (11:54 IST)
ನವದೆಹಲಿ: ನಮ್ಮ ರೈತರ ಹಿತಾಸಕ್ತಿ ಕಾಪಾಡಬೇಕು ಎಂದರೆ ಯಾವ ನಷ್ಟ ಎದುರಿಸಲೂ ಸಿದ್ಧ ಎನ್ನುವ ಮೂಲಕ ಪ್ರಧಾನಿ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಅಮೆರಿಕಾದ ಮಾಂಸಾಹಾರ ಹಾಲು ತರಲು ಟ್ರಂಪ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲವೆಂಬ ಕಾರಣಕ್ಕೆ ಈಗ ಒಂದಲ್ಲಾ ಒಂದು ನೆಪ ಹೂಡಿ ಭಾರತದ ಮೇಲೆ ಕೆಂಡ ಕಾರುತ್ತಿದ್ದಾರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ.

ಅಮೆರಿಕಾದಲ್ಲಿ ಗೋವುಗಳಿಗೂ ಮಾಂಸಾಹಾರ ನೀಡಲಾಗುತ್ತದೆ. ಈ ಗೋವುಗಳ ಹಾಲನ್ನು ಮಾಂಸಾಹಾರದ ಹಾಲು ಎನ್ನಲಾಗುತ್ತದೆ. ಈ ಹಾಲು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟರೆ ಭಾರತದ ಹೈನುಗಾರಿಕೆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಲಿದೆ.

ಇದರಿಂದ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಎಷ್ಟೋ ರೈತರ ಬದುಕು ಬೀದಿಗಳಿಗೆ ಬೀಳಲಿದೆ. ಹೀಗಾಗಿ ಭಾರತ ಸರ್ಕಾರ ಅಮೆರಿಕಾದ ಹಾಲು ಎಂಟ್ರಿ ಕೊಡಲು ಬಿಡುತ್ತಿಲ್ಲ. ಇದೀಗ ಮೋದಿ ಕೂಡಾ ಎಷ್ಟೇ ಕಷ್ಟವಾದರೂ ಸರಿ ನಮ್ಮ ರೈತರ ಹಿತಾಸಕ್ತಿ ಬಲಿಕೊಡಲು ಸಿದ್ಧವಿಲ್ಲ ಎಂದಿದ್ದಾರೆ.

ಅಮೆರಿಕಾ ವಿಧಿಸಿರುವ 50% ಸುಂಕ ಭಾರತದಿಂದ ರಫ್ತಾಗುವ ಕೃಷಿ ಉತ್ಪನ್ನಗಳಿಗೂ ಅನ್ವಯಿಸಲಿದೆ. ಹೀಗಾಗಿ ಮೋದಿ ಈಗ ನಮ್ಮ ರೈತರ ಹಿತಾಸಕ್ತಿಯೇ ನಮ್ಮ ಆದ್ಯತೆ. ಅದಕ್ಕಾಗಿ ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ. ರೈತರು, ಮೀನುಗಾರರು, ಹೈನುಗಾರರ ಹಿತಾಸಕ್ತಿ ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಆ ಮೂಲಕ ಟ್ರಂಪ್ ಗೂ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ