ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬಳಿ ಹಣವೇ ಇಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Krishnaveni K

ಶನಿವಾರ, 16 ಮಾರ್ಚ್ 2024 (16:28 IST)
Photo Courtesy: Twitter
ಕಲಬುರಗಿ: ಕರ್ನಾಟಕದಲ್ಲಿ ಕಾಂಗ್ರೆಸ್ ಬಳಿ ಹಣವೇ ಇಲ್ಲ. ನೀವು ಕರ್ನಾಟಕವನ್ನು ಬಲಪಡಿಸಲು ಇಚ್ಛಿಸುತ್ತಿದ್ದೀರಿ ಎಂದರೆ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಕರೆಂಟು ಫ್ರೀ ಕೊಡ್ತೀವಿ ಎಂದು ಹೇಳಿ ಕೊನೆಗೂ ಕರೆಂಟೂ ಇಲ್ಲ, ಏನೂ ಇಲ್ಲ ಎಂದಿದ್ದಾರೆ.

ಈ ಉರಿಬಿಸಿಲಿನಲ್ಲೂ ಹೆಲಿಪ್ಯಾಡ್ ನಿಂದ ಇಲ್ಲಿಯವರೆಗೆ ನೀವು ನನ್ನನ್ನು ಸ್ವಾಗತಿಸಲು ನಿಂತಿದ್ದು ನೋಡಿ ನನ್ನ ಉತ್ಸಾಹ ಹೆಚ್ಚಾಗಿದೆ. ಜನರು ಈ ಬಾರಿ ತೀರ್ಮಾನ ಮಾಡಿದ್ದಾರೆ. ಬಿಜೆಪಿಗೆ 400 ಸೀಟು ಸಿಗಲಿದೆ. ಈ ಬಿಸಿಲಿನಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿರುವುದು ನೋಡಿದರೇ ಗೊತ್ತಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ. ಜನರಲ್ಲಿ ಭರವಸೆಯೇ ಸತ್ತು ಹೋಗಿದೆ. ಕಾಂಗ್ರೆಸ್ ಗೆ ಭ್ರಷ್ಟಾಚಾರವೇ ಉಸಿರಾಗಿದೆ. ಚುನಾವಣೆಗೆ ಮೊದಲು ಭರವಸೆ ನೀಡಿ ಈಗ ನಿಮ್ಮ ಜೇಬಿಗೆ ಕೈ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಮಾವೇಶದಲ್ಲಿ ಮಾತನಾಡುವ ಮೊದಲು ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ಉರಿಬಿಸಿಲಿನಲ್ಲೂ ನೂರಾರು ಜನ ರಸ್ತೆ ಬದಿಯಲ್ಲಿ ನಿಂತು ಮೋದಿಗೆ ಸ್ವಾಗತ ಕೋರಿದರು. ತಮ್ಮನ್ನು ಸ್ವಾಗತಿಸಿದ ಎಲ್ಲರತ್ತ ಕೈ ಬೀಸಿದ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಇದು ಕರ್ನಾಟಕದಲ್ಲಿ ಮೋದಿಯ ಮೊದಲ ಚುನಾವಣಾ ರಾಲಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ