ಬೆಂಬಲ ಬೇಕಿದ್ದರೆ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿ

ಶನಿವಾರ, 14 ಜನವರಿ 2017 (17:55 IST)
ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣದ ಭರವಸೆ ನೀಡಿದರೆ ಮಾತ್ರ ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಂತರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ವಿವಾದಿತ ರಾಮಜನ್ಮಭೂಮಿ ಮಂದಿರದ ಅರ್ಚಕರು ಹೇಳಿದ್ದಾರೆ.
ಮಹಾಂತ ಮತ್ತು ಸಾಧುಗಳು ರಾಮನಲ್ಲಿ ನಂಬಿಕೆ ಇಟ್ಟಿದ್ದು, ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವನ್ನು ನೋಡುವುದೊಂದೇ ಅವರ ಏಕೈಕ ಬಯಕೆಯಾಗಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ. 
 
ಮೋದಿ ಸರ್ಕಾರ ಅಧಿಕಾರಕ್ಕೇರಿದಾಗ ಈಗಲಾದರೂ ಮಂದಿರ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಬೆಳೆಯಿತು. ಈಗಲಾದರೂ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಬೇಕು ಮತ್ತು ತಮ್ಮ ಅಧಿಕಾರಾವಧಿಯಲ್ಲಿಯೇ ಮಂದಿರ ನಿರ್ಮಾಣವಾಗುತ್ತದೆ ಎಂಬ ಭರವಸೆ ನೀಡಬೇಕು ಮತ್ತು ಘೋಷಣೆಯನ್ನು ಕೈಗೊಳ್ಳಬೇಕು, ಹೀಗಾದರೆ ಮಾತ್ರ ನಾವು ಹಿಂದೂ ಸಮುದಾಯದವರನ್ನು ಒಗ್ಗೂಡಿಸಿ ಬಿಜೆಪಿಗೆ ಮತ ನೀಡಿ ಕೇಳಿಕೊಳ್ಳುತ್ತೇವೆ. ನಾವು ಬೆಂಬಲ ನೀಡಿದರೆ ಬಿಜೆಪಿಗೆ ಗೆಲುವು ನಿಶ್ಚಿತವಾಗುತ್ತದೆ ಎಂದಿದ್ದಾರೆ ದಾಸ್.
 
ದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಯೋಧ್ಯೆಯ ರಸಿಕ್ ನಿವಾಸ ದೇವಾಲಯದ ಮಹಾಂತ ರಘುವರ್ ಶರಣ್, ಬಿಜೆಪಿ ನಾಯಕರು ಅಯೋಧ್ಯೆ ರಾಮ ಮಂದಿರ ಆಂದೋಲನದ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಂಡರು ಆದರೆ ಈ ವಿಷಯವನ್ನು ಎಂದಿಗೂ ಸಂಸತ್ತಿನಲ್ಲಿ ಎತ್ತಲಿಲ್ಲ ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ