'ಕೈ' ಗೆ ಬಲವಾದ ಹೊಡೆತ: ಪುತ್ರ ಸಮೇತ ಬಿಜೆಪಿ ತೆಕ್ಕೆಗೆ ಮಾಜಿ ಮುಖ್ಯಮಂತ್ರಿ

ಬುಧವಾರ, 18 ಜನವರಿ 2017 (12:47 IST)
ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎನ್‌ಡಿ( ನಾರಾಯಣ ದತ್) ತಿವಾರಿ ತಮ್ಮ ಪುತ್ರ ರೋಹಿತ್ ಶೇಖರ್ ಜತೆಯಲ್ಲಿ ಇಂದು ಬಿಜೆಪಿ ಸೇರಲಿದ್ದು, ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಆಘಾತವನ್ನು ತಂದಿಟ್ಟಿದೆ. 
ತಿವಾರಿ ಉತ್ತರಾಖಂಡ್‌ನ ಕುಮಾವೂನ್ ಪ್ರದೇಶದಿಂದ ತಮ್ಮ ಮಗನಿಗೆ ಬಿಜೆಪಿ ಸೀಟು ಬಯಸಿದ್ದಾರೆ. 
 
ರೋಹಿತ್ ಶೇಖರ್ ತಿವಾರಿ ಮತ್ತು ಉಜ್ವಲಾ ಶರ್ಮಾ ಮಗನಾಗಿದ್ದಾನೆ. ಅವರು ತನ್ನ ತಂದೆ ಎಂಬುದನ್ನು ನಿರೂಪಿಸುವ ಸಲುವಾಗಿ ರೋಹಿತ್‌ ಶೇಖರ್‌ ಅವರು 2008ರಲ್ಲಿ ಕೋರ್ಟ್‌ ಮೊರೆ ಹೋಗಿದ್ದರು. 2012ರಲ್ಲಿ ದೆಹಲಿ ಹೈಕೋರ್ಟ್‌ ಡಿಎನ್‌ಎ ಪರೀಕ್ಷೆಗೆ ಆದೇಶಿಸಿತ್ತು. ಇದು ತಿವಾರಿ - ರೋಹಿತ್ ಸಂಬಂಧವನ್ನು ದೃಢೀಕರಿಸಿತ್ತು. 
 
ಆರು ವರ್ಷಗಳಿಂದ ಸುದೀರ್ಘ‌ ಕಾನೂನು ಹೋರಾಟ ನಡೆಸಿಕೊಂಡು ಬಂದಿದ್ದ 34ರ ಹರೆಯದ ಯುವಕ ರೋಹಿತ್‌ ಶೇಖರ್‌ಗೆ ಕೊನೆಗೂ ಜಯ ಸಿಕ್ಕಿತ್ತು. 2014ರಲ್ಲಿ 'ರೋಹಿತ್‌ ನನ್ನ ಮಗ' ಕೊನೆಗೂ ಒಪ್ಪಿಕೊಂಡ ತಿವಾರಿ ತಮ್ಮ 88ನೇ ಇಳಿ ವಯಸ್ಸಿನಲ್ಲಿ ಉಜ್ವಲಾ ಅವರನ್ನು ಮದುವೆಯಾಗಿದ್ದರು. ತನ್ಮೂಲಕ ರೋಹಿತ್‌ ತಾಯಿ ಉಜ್ವಲಾ ಶರ್ಮಾ ಜತೆ ತಮಗೆ ಸಂಬಂಧವಿತ್ತು ಎಂಬುದನ್ನೂ ಅವರು ಒಪ್ಪಿಕೊಂಡಿದ್ದರು.
 
ಮೂರು ಬಾರಿ ಉತ್ತರ ಪ್ರದೇಶ (1976-77, 1984-85, 1988-89), ಒಂದು ಬಾರಿ ಉತ್ತರ ಖಂಡ ಮುಖ್ಯಮಂತ್ರಿ (2002-2007) ಮತ್ತು 1986-1987ರಲ್ಲಿ ಆಂಧ್ರಪ್ರದೇಶ ರಾಜ್ಯಪಾಲರಾಗಿ ಮತ್ತು ರಾಜೀವ್ ಗಾಂಧಿ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿ ಸಹ ತಿವಾರಿ ಕಾರ್ಯ ನಿರ್ವಹಿಸಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ