ಬೆಟ್ಟದ ಮೇಲೆ ನೆಲೆಗೊಂಡ ಆನೆಗುಡ್ಡೆ ವಿನಾಯಕ ದೇವಸ್ಥಾನ

ಶುಕ್ರವಾರ, 24 ಜೂನ್ 2016 (20:34 IST)
ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಬಾಶಿಯು ಕುಂದಾಪುರಕ್ಕೆ 9 ಕಿಮೀ ದೂರದಲ್ಲಿ ನೆಲೆಗೊಂಡಿದೆ. ಮಹಾಲಿಂಗೇಶ್ವರ ಮತ್ತು ಆನೆಗುಡ್ಡೆ ವಿನಾಯಕ ಮಂದಿರಗಳಿಗೆ ಇದು ಪ್ರಖ್ಯಾತಿ ಪಡೆದಿದೆ. ಈ ಸ್ಥಳದ ಹೆಸರು  ಕುಂಬಾಸುರನಿಂದ ಜನ್ಯವಾಗಿದೆ. ಶಾಸನಗಳಲ್ಲಿ ಕುಂಭಾ-ಕಾಶಿ ಎಂದೇ ಈ ಸ್ಥಳವನ್ನು ವರ್ಣಿಸಲಾಗಿದೆ. ಪರಶುರಾಮ ಸೃಷ್ಟಿ ಎಂದು ಕರೆಯುವ ಏಳು ಸ್ಥಳಗಳ ಪೈಕಿ ಇದೂ ಕೂಡ ಯಾತ್ರಾಸ್ಥಳವಾಗಿದೆ.
 
 
ಬೆಟ್ಟದಲ್ಲಿ ನೆಲೆಗೊಂಡಿರುವ ಆನೆಗುಡ್ಡೆ ವಿನಾಯಕ ದೇವಸ್ಥಾನವು ಅನೇಕ ಮಂದಿ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.  ಮಹಾಲಿಂಗೇಶ್ವರ ದೇವಾಲಯವು ಕೆರೆಯಿಂದ ಸುತ್ತುವರಿದಿದ್ದು ಭಾಗೀರಥಿ ನೀರು ಉದ್ಭವವಾಗುತ್ತದೆಂದು ಹೇಳುವ ಆಳವಿಲ್ಲದ ಗುಂಡಿಗೆ ಪೂಜೆ ಸಲ್ಲಿಸಲಾಗುತ್ತದೆ. ಕೆರೆಯ ಬಲಭಾಗದಲ್ಲಿ ಸೂರ್ಯ ಪುಷ್ಕರಣಿ ಮತ್ತು ಎಡಭಾಗದಲ್ಲಿ ಚಂದ್ರ ಪುಷ್ಕರಣಿಯಿವೆ. 
ಆನೆಗುಡ್ಡೆಯೆಂದರೆ ಆನೆ ಸೊಂಡಿಲಿನ ದೇವರು ವಿನಾಯಕನ ಆವಾಸಸ್ಥಾನ. ಈ ಪ್ರದೇಶದಲ್ಲಿ ಬರಗಾಲ ಅಪ್ಪಳಿಸಿದಾಗ ಅಗಸ್ತ್ಯ ಮುನಿ ವರುಣನ ಸಂತೃಪ್ತಿಗೆ ಯಜ್ಞ ಮಾಡಿದರು. ಕುಂಬಾಸುರ ರಾಕ್ಷಸ ಯಜ್ಞವನ್ನು ನಡೆಸುವ ಋಷಿಗಳಿಗೆ ತೊಂದರೆ ಮಾಡಿದ. ಈ ಋಷಿಗಳನ್ನು ಪಾರು ಮಾಡಲು ಭಗವಾನ್ ಗಣೇಶ ಭೀಮನಿಗೆ ಆಶೀರ್ವದಿಸಿ ಕತ್ತಿಯೊಂದನ್ನು ನೀಡಿದ. ಈ ಕತ್ತಿಯಿಂದ ಭೀಮ ರಾಕ್ಷಸನನ್ನು ಕೊಂದು ಯಜ್ಞ ನೆರವೇರಲು ಅನುಕೂಲ ಕಲ್ಪಿಸಿದ ಎಂಬ ಪೌರಾಣಿಕ ಕಥೆಯಿದೆ. 
 
ವ್ಯಕ್ತಿಯ ತೂಕಕ್ಕೆ ಸಮನಾದ ಮೌಲ್ಯಯುತ ವಸ್ತುಗಳನ್ನು ಭಕ್ತರು ದೇವರಿಗೆ ಅರ್ಪಿಸುವ ಪದ್ಧತಿಯಿದ್ದು ಅದಕ್ಕೆ ತುಲಾಭಾರ ಎನ್ನಲಾಗುತ್ತದೆ. ಪವಿತ್ರ ಆಚರಣೆಗಳಾದ ಮದುವೆ, ನಾಮಕರಣ ಮುಂತಾದವು ಕೂಡ ಇಲ್ಲಿ ನಡೆಯುತ್ತದೆ.
 
ಇಲ್ಲಿ ಪಂಚಕಜ್ಜಾಯ ಎಂಬ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಇದು ಬೇಳೆ, ಸಕ್ಕರೆ, ಕೊಬ್ಬರಿ, ಹಾಲು ಮತ್ತು ಜೇನುತುಪ್ಪದ ಮಿಶ್ರಣವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ