ಭಾರತದ ರಾಷ್ಟ್ರೀಯ ಲಾಂಛನದ ಬಗೆಗೊಂದಿಷ್ಟು...

ರಾಷ್ಟ್ರೀಯ ಲಾಂಛನವು ಚಕ್ರವರ್ತಿ ಅಶೋಕನ ಕಾಲದ್ದು. ಉತ್ತರ ಪ್ರದೇಶದ ವಾರಾಣಸಿ ಬಳಿ ಇರುವ ಸಾರನಾಥದಲ್ಲಿರುವ ಸಿಂಹದ ಪ್ರತಿಕೃತಿಯಿದು. ಮೂರನೇ ಶತಮಾನದಲ್ಲಿ ಈ ಸಿಂಹವನ್ನು ಬುದ್ಧನ ಶಾಂತಿ ಬೋಧನೆ ಮತ್ತು ಜ್ಞಾನೋದಯದ ಸಂಕೇತವಾಗಿ ಅಶೋಕ ಚಕ್ರವರ್ತಿ ಸ್ಥಾಪಿಸಿದನು. ವಿಶ್ವ ಶಾಂತಿ ಮತ್ತು ಸಹಕಾರಕ್ಕೆ ಸಂಬಂಧಿಸಿ ಭಾರತದ ಪ್ರಾಚೀನ ನಂಬಿಕೆಯ ಬದ್ಧತೆಯನ್ನು ಇದು ಪ್ರಕಟೀಕರಿಸುತ್ತದೆ.

ಇದರಲ್ಲಿ ನಾಲ್ಕು ಸಿಂಹಗಳ ಮುಖಗಳಿವೆ. ಶಕ್ತಿ, ಧೈರ್ಯ ಮತ್ತು ವಿಶ್ವಾಸದ ಸಂಕೇತಗಳಿವು. ಇವುಗಳು ವೃತ್ತಾಕಾರದ ಅಡಿಪಾಯದ ಮೇಲಿರುತ್ತವೆ. ಈ ಅಡಿಪಾಯವು ನಾಲ್ಕು ಪ್ರಾಣಿಗಳನ್ನೊಳಗೊಂಡಿದೆ. ಉತ್ತರದಲ್ಲಿ ಸಿಂಹ, ಪೂರ್ವದಲ್ಲಿ ಆನೆ, ದಕ್ಷಿಣದಲ್ಲಿ ಕುದುರೆ ಮತ್ತು ಪಶ್ಚಿಮದಲ್ಲಿ ಎತ್ತು. ಈ ಅಡಿಪಾಯವು ಪೂರ್ಣವಾಗಿ ಅರಳಿದ ಕಮಲದ ಮೇಲಿದ್ದು, ಜೀವಜಾಲದ ಚೇತನ ಮತ್ತು ಕ್ರಿಯಾಶೀಲತೆ ಸ್ಫೂರ್ತಿಯ ಪ್ರತೀಕವಾಗಿದೆ.

ಇವೆಲ್ಲದರ ಕೆಳಗೆ ದೇವನಾಗರಿ ಲಿಪಿಯಲ್ಲಿ ರಾಷ್ಟ್ರೀಯ ಘೋಷಾ ವಾಕ್ಯ "ಸತ್ಯಮೇವ ಜಯತೆ" ಎಂಬುದನ್ನು ಬರೆಯಲಾಗಿದೆ. ಸತ್ಯಕ್ಕೇ ವಿಜಯ ಎಂಬ ಈ ವಾಕ್ಯವನ್ನು ತೆಗೆದುಕೊಂಡಿರುವುದು ಮುಂಡಕ ಉಪನಿಷತ್ತಿನಿಂದ.

ವೆಬ್ದುನಿಯಾವನ್ನು ಓದಿ