ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಮಿತಿಯ ಅಜೀವ ಸದಸ್ಯತ್ವ ಸ್ಥಾನವನ್ನು ಸ್ವೀಕರಿಸಲು ವಿವಾದಿತ ಮಾಜಿ ಕಾಮನ್ ವೆಲ್ತ್ ಗೇಮ್ಸ್ ಅಧ್ಯಕ್ಷ ಸುರೇಶ್ ಕಲ್ಮಾಡಿ ನಿರಾಕರಿಸಿದ್ದಾರೆ.
ಕಲ್ಮಾಡಿ ಭಾರತದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅವ್ಯವಹಾರ ನಡೆಸಿದ್ದ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು. ಈ ವಿವಾದಿತ ಮಾಜಿ ಅಧ್ಯಕ್ಷರಿಗೆ ಅಜೀವ ಸದಸ್ಯತ್ವ ನೀಡಿ ಒಲಿಂಪಿಕ್ಸ್ ಸಮಿತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೇಂದ್ರ ಕ್ರೀಡಾ ಸಚಿವರವರೆಗೆ ಈ ಪ್ರಕರಣ ತಲುಪಿತ್ತು.
ಈ ಹಿನ್ನಲೆಯಲ್ಲಿ ಯಾವುದೇ ವಿವಾದ ಮೈ ಮೇಲೆಳೆದುಕೊಳ್ಳುವುದು ಬೇಡವೆಂದು ಸ್ವತಃ ಕಲ್ಮಾಡಿ ತಮಗೆ ಈ ಹುದ್ದೆಯೇ ಬೇಡವೆಂದಿದ್ದಾರೆ. ಈ ಹುದ್ದೆ ಸ್ವೀಕರಿಸುವುದು ಸಮಂಜಸವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಕಲ್ಮಾಡಿ ಮತ್ತು ಇನ್ನೊಬ್ಬ ಅಭಯ್ ಚೌಟಾಲಾ ಕೂಡಾ ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವಿಷಯವಾಗಿ ಕೇಂದ್ರ ಕ್ರೀಡಾ ಸಚಿವಾಲಯ ಒಲಿಂಪಿಕ್ಸ್ ಸಮಿತಿಗೆ ಶೋಕಾಸ್ ನೋಟೀಸು ಜಾರಿ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ