ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ?

ಗುರುವಾರ, 14 ಜುಲೈ 2022 (14:02 IST)
ನವದೆಹಲಿ : ಇನ್ನುಮುಂದೆ ಲೋಕಸಭೆ, ರಾಜ್ಯಸಭೆ ಅಧಿವೇಶನಗಳಲ್ಲಿ ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡರ್, ನಾಚಿಕೆಗೇಡು, ದ್ರೋಹ, ಭ್ರಷ್ಟ, ಅಸಮರ್ಥ, ಸರ್ವಾಧಿಕಾರಿ ಅಂತಹ ಅಸಂಸದೀಯ ಪದಗಳನ್ನು ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಕಿರು ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಇದೇ ಜುಲೈ 18ರಿಂದ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುಂಚಿತವಾಗಿ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗಿದೆ. 

ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ಸ್ಪೀಕರ್, ಅವರನ್ನು ಕಲಾಪದಿಂದ ಹೊರ ಹಾಕುತ್ತಾರೆ.

ಈ ಬಗ್ಗೆ ಬಿಡುಗಡೆಯಾಗಿರುವ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುವ ಮಾತುಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ ಸಭಾಪತಿಯವರು ಅಸಂಸದೀಯ ಪದಗಳನ್ನು ಕಡತದಿಂದ ತೆಗೆದು ಹಾಕುತ್ತಾರೆ. ಆದರೆ ಸಭಾಪತಿಗೆ ಯಾವುದೇ ಪದಗಳ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸರ್ವಾಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ಢಿಂಢೋರ ಪೀಟ್ನಾ, ಬೆಹ್ರಿ ಸರ್ಕಾರ್ ಮುಂತಾದ ಪದಗಳನ್ನೂ ಅಸಂಸದೀಯ ಎಂದು ಗುರುತಿಸಲಾಗಿದ್ದು, ಇಂತಹ ಪದಗಳನ್ನು ಬಳಸಿದರೂ ಕಡತದಿಂದ ತೆಗೆದುಹಾಕಲಾಗುತ್ತದೆ. 

ಪುಸ್ತಕದಲ್ಲಿ ಅಸಂಸದೀಯ ಎಂದು ಗುರುತಿಸಲಾದ ಪದಗಳಲ್ಲಿ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು ಸೇರಿದೆ.

ಇವುಗಳ ಹೊರತಾಗಿ ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಆಂಸು, ಅಪಮಾನ್, ಅಸತ್ಯ, ಅಹಂಕಾರ್, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್ಕಟ್. ಲಾಲಿಪಾಪ್, ಸಂವೇದನಾಹೀನ್, ಲೈಂಗಿಕ ಕಿರುಕುಳ ಪದಗಳನ್ನೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಲೋಕಸಭಾ ಸೆಕ್ರಟೇರಿಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ