ವಿಶಿಗೆ ಕಿರುಕುಳದ ಸ್ವಾಗತ

ಸೋಮವಾರ, 15 ಅಕ್ಟೋಬರ್ 2007 (12:52 IST)
ವಿಶ್ವಚಾಂಪಿಯನ್ ಪಟ್ಟ ಗೆದ್ದು ಸ್ವದೇಶಕ್ಕೆ ಮರಳಿದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಅವರಿಗೆ ಅದ್ದೂರಿಯ ಸ್ವಾಗತ ದೊರೆಯುವ ಬದಲು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಸ್ವಾಗತ ಸಿಕ್ಕಿತು.

ಭಾರತದ ಪ್ರಮುಖ ಐಟಿ ಶಿಕ್ಷಣ ಸಂಸ್ಥೆ ಆನಂದ್ ಅವರ ಸ್ವಾಗತದ ಪ್ರಾಯೋಜಕತ್ವದ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶೇಷ ಎಂದರೆ ಅದೇ ಸಂಸ್ಥೆಯ ಪ್ರಮುಖ ರಾಯಭಾರಿಯಾಗಿ ಆನಂದ್ ಗುರುತಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಆನಂದ್ ಅವರಿಗಾಗಿ ಕಾಯ್ದಿದ್ದ ಪತ್ರಕರ್ತರು ಮತ್ತು ಅಭಿಮಾನಿಗಳನ್ನು ನಿಯಂತ್ರಿಸಲಾಗದ ಪರಿಣಾಮವಾಗಿ ಆನಂದ್ ಅವರು ಗೊಂದಲಮಯ ವಾತಾವರಣದಿಂದ ಹೊರಗೆ ಬಿಳಲು ಪರದಾಡಬೇಕಾಯಿತು. ಆನಂದ್‌ಗಾಗಿ ಕಾದಿದ್ದ ಛಾಯಾಗ್ರಾಹಕರು ಮತ್ತು ದೃಶ್ಯ ಮಾಧ್ಯಮದ ಕ್ಯಾಮರಾಮನ್‌ಗಳು ಒಬ್ಬರಿಗೊಬ್ಬರು ಅಕ್ಷರಶಃ ತುಳಿದಾಡುವ ಪ್ರಸಂಗ ತಲೆದೊರಿತ್ತು.

ವಿಶ್ವನಾಥನ್ ಅವರ ಸ್ವಾಗತಕ್ಕೆ ಐಟಿ ಶಿಕ್ಷಣ ಸಂಸ್ಥೆ ಸುಮಾರು ಇನ್ನೂರು ಕಾರ್ಯಕರ್ತರನ್ನು ವಿಮಾನ ನಿಲ್ದಾಣಕ್ಕೆ ಕರೆದು ತಂದಿತ್ತು. ಕಾರ್ಯಕರ್ತರ ನುಗ್ಗಾಟ ಯಾವ ಪರಿ ಇತ್ತು ಎಂದರೆ ದೆಹಲಿ ಚೆಸ್ ಅಸೋಸಿಯೆಷನ್ ಅಧಿಕಾರಿಗಳು ಮತ್ತು ಆನಂದ್ ಅವರನ್ನು ಬೇಕಾಬಿಟ್ಟಿಯಾಗಿ ದಬ್ಬಲಾಯಿತು.

ಮೆಕ್ಸಿಕೊದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಅವಿವಾದಿತ ಚೆಸ್ ಚಾಂಪಿಯನ್ ಪಟ್ಟ ಏರಿದ ಹದಿನೈದು ದಿನಗಳ ನಂತರ ಅವರು ಸ್ವದೇಶಕ್ಕೆ ಸೋಮವಾರ ಮರಳಿದರು. ವಿಮಾನ ನಿಲ್ದಾಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಬೇಕಿತ್ತು. ಗಲಿಬಿಲಿಯ ವಾತಾವರಣದ ಕಾರಣ ವಿಶ್ವನಾಥನ್ ಆನಂದ್ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ.

ವೆಬ್ದುನಿಯಾವನ್ನು ಓದಿ