ಅಷಾಢ ಮಾಸದ ಏಕಾದಶಿಯಂದು ವ್ರತ ಮಾಡುವುದರಿಂದ ಆಗುವ ಲಾಭವೇನು ಗೊತ್ತೇ?

ಶುಕ್ರವಾರ, 20 ಜುಲೈ 2018 (07:10 IST)
ಬೆಂಗಳೂರು : ಆಷಾಢ ಮಾಸದಲ್ಲಿ ಕೆಲವರು ಉಪವಾಸ, ವ್ರತಗಳನ್ನು ಮಾಡುತ್ತಾರೆ. ಕಾರಣ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಈ ಮಾಸದ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ.


ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ.


ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.


ವ್ರತವನ್ನು ಮಾಡುವ ಪದ್ಧತಿ :
ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.  ಹೀಗೆ ಅಂದು ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ