ಚಳಿಗಾಲದಲ್ಲಿ ಒಣ ತ್ವಚೆಯ ಆರೋಗ್ಯಕ್ಕಾಗಿ ಕೆಲವು ಮಾಹಿತಿ

ನಾಗಶ್ರೀ ಭಟ್

ಶುಕ್ರವಾರ, 29 ಡಿಸೆಂಬರ್ 2017 (12:26 IST)
ಚಳಿಗಾಲ ಬಂತೆಂದರೆ ಸಾಕು ಶುಷ್ಕ ತ್ವಚೆಯಿರುವವರ ಚರ್ಮ ಬಿರಿಯಲು ಪ್ರಾರಂಭವಾಗುತ್ತದೆ. ತುಟಿ ಸೀಳು ಬಿಟ್ಟು ರಕ್ತ ಬರುವುದು, ಮುಖದ ಚರ್ಮ ಬಿರಿಯುವುದು, ಅಲರ್ಜಿಗಳಾಗುವುದು ಹೀಗೆ ಹಲವು ಸಮಸ್ಯೆಗಳು, ಇದಕ್ಕಾಗಿ ವೈದ್ಯರ ಬಳಿ ಅಥವಾ ಮಾರುಕಟ್ಟೆಗಳಲ್ಲಿ ದೊರೆಯುವ ವಿವಿಧ ಕ್ರಿಮ್‌ಗಳ ಮೊರೆ ಹೋಗುವವರೆ ಸಂಖ್ಯೆ ಏನು ಕಡಿಮೆ ಇಲ್ಲ.

ಆದರೆ ಎಲ್ಲೂ ಹೋಗದೇ ನೀವು ಮನೆಯಲ್ಲಿಯೇ ಕುಳಿತು ಕೆಲವು ಔಷಧಗಳನ್ನು ತಯಾರಿಸಿಕೊಳ್ಳಬಹುದು. ಅದು ನೈಸರ್ಗಿಕವಾಗಿದ್ದು, ಆರೋಗ್ಯಕರವು ಹೌದು ಇದು ಮುಖಕ್ಕೆ ಅಂದವನ್ನು ಹೆಚ್ಚಿಸಿ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ ಅದನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕೂತುಹಲ ನಿಮಗಿದ್ದಲ್ಲಿ ಈ ಮಾಹಿತಿ ನಿಮಗೆ ಉಪಯೋಗವಾಗಬಹುದು.
 
* ಅಲೋವೆರಾ ಎಲೆಯನ್ನು ತುಂಡರಿಸಿ ಅದರಲ್ಲಿರುವ ಜೆಲ್ ಅನ್ನು ತೆಗೆದು ಅದರಿಂದ ದಿನವೂ ಮಲಗುವ ಮುನ್ನ ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೆಯೇ ಇಟ್ಟು ಬೆಳಿಗ್ಗೆ ಅರೆ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಅಲೋವೆರಾವನ್ನು ಹಲವಾರು ಕ್ರೀಮ್ ಹಾಗೂ ಲೋಷನ್‌ಗಳಲ್ಲಿ ಬಳಸುತ್ತಾರೆ. ಆದರೆ ಫ್ರೆಶ್ ಅಲೋವೆರಾವನ್ನು ಬಳಸುವುದು ಚರ್ಮಕ್ಕೆ ತುಂಬಾನೇ ಉತ್ತಮ. ಇದು ಚರ್ಮದಲ್ಲಿನ ಮಾಯಿಶ್ಚರ್‌ನ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಕಾಂತಿಯನ್ನು ನೀಡುತ್ತದೆ.
 
* ದಿನಕ್ಕೆ 1 ರಿಂದ 2 ಬಾರಿ ತೆಂಗಿನ ಎಣ್ಣೆಯನ್ನು ಕೈ, ಕಾಲು ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಚರ್ಮವು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದನ್ನು ಬಳಸುವುದು ತುಂಬಾ ಸುಲಭವಾಗಿದ್ದು ಇದು ತ್ವಚೆಯಲ್ಲಿನ ಮಾಯಿಶ್ಚರ್‌ನ ಅಂಶವನ್ನು ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ.
 
* 2 ಚಮಚ ಆಲಿವ್ ಎಣ್ಣೆ ಮತ್ತು 1/2 ಚಮಚ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ, 2-3 ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಹೆಚ್ಚುವರಿ ಎಣ್ಣೆಯನ್ನು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ. ದಿನವೂ ಮಲಗುವ ಮುನ್ನ ಇದನ್ನು ಮಾಡಿದರೆ ಇದು ಸೂರ್ಯನ ಕಿರಣದಿಂದಾದ ಹಾನಿಯನ್ನು ಹೋಗಲಾಡಿಸಿ ತ್ವಚೆಗೆ ಅಗತ್ಯವಿರುವ ಮಾಯಿಶ್ಚರ್‌ನ ಪ್ರಮಾಣವನ್ನು ಹೆಚ್ಚಿಸಿ ಅಲರ್ಜಿ, ತುರಿಕೆ ರೀತಿಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
 
* 1-2 ವಿಟಮಿನ್-E ಮಾತ್ರೆಯನ್ನು ಒಡೆದು ಅದರಲ್ಲಿರುವ ಎಣ್ಣೆಯನ್ನು ಒಣ ತ್ವಚೆಯಿರುವ ಭಾಗಕ್ಕೆ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ. ಇದನ್ನು ದಿನವೂ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆ ತೊಳೆದುಕೊಳ್ಳಿ. ಇದು ಒಣ ತ್ವಚೆಯಿಂದ ಉಂಟಾದ ಹಾನಿಯನ್ನು ನಿವಾರಿಸುತ್ತದೆ.
 
* 1 ಚಮಚ ಗ್ಲಿಸರಿನ್ ಮತ್ತು 1 ಚಮಚ ರೋಸ್ ವಾಟರ್ ಅನ್ನು ಬೆರೆಸಿ ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 2-3 ಗಂಟೆಗಳ ನಂತರ ತೊಳೆದುಕೊಳ್ಳಿ. ಚರ್ಮದಲ್ಲಿ ಮಾಯಿಶ್ಚುರ್‌ನ ಅಂಶವನ್ನು ಉಳಿಸುವಲ್ಲಿ ಗ್ಲಿಸರಿನ್ ಉತ್ತಮ ಕಾರ್ಯವನ್ನು ನಿರ್ವಹಿಸುವುದರೊಂದಿಗೆ ಒಣಗಿದ ತುಟಿಗೂ ಉತ್ತಮ ಔಷಧವಾಗಿದೆ. ಉತ್ತಮ ಪರಿಣಾಮಕ್ಕಾಗಿ ಪ್ರತಿದಿನವೂ ಇದನ್ನು ಮಾಡಿ.
 
* ದಿನವೂ ಮಲಗುವ ಮುನ್ನ ಮುಖಕ್ಕೆ ವ್ಯಾಸಲಿನ್ ಅನ್ನು ಹಚ್ಚಿ ಮಲಗಿ. ಇದು ಚರ್ಮದಲ್ಲಿ ಮಾಯಿಶ್ಚುರ್‌ನ ಅಂಶವನ್ನು ಉಳಿಸುವುದಲ್ಲದೇ ಚರ್ಮಕ್ಕೆ ಉಂಟಾಗುವ ನೀರಿನ ನಷ್ಟವನ್ನು ತಡೆಯುತ್ತದೆ.
 
* 2 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಸೌತೆಕಾಯಿ ರಸ, 2 ಚಮಚ ಹಾಲನ್ನು ಹಾಕಿ ಪೇಸ್ಟ್ ಅನ್ನು ರೆಡಿ ಮಾಡಿ. ನಂತರ ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿಕೊಂಡು 15-20 ನಿಮಿಷ ಬಿಟ್ಟು ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ತುರಿಕೆ ಮತ್ತು ಅಲರ್ಜಿಗಳಿಂದ ಕಾಪಾಡುತ್ತದೆ. ಉತ್ತಮ ಪರಿಣಾಮಕ್ಕಾಗಿ ಇದನ್ನು ವಾರಕ್ಕೊಮ್ಮೆ ಮಾಡಿ.
 
* ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್ ಅನ್ನು ಹಾಕಿಕೊಂಡು 15-20 ನಿಮಿಷ ಬಿಟ್ಟು ಅರೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಆದಷ್ಟು ಹೆಚ್ಚು ಜ್ಯೂಸ್ ಸೇವಿಸಿ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವಂತೆ ನೋಡಿಕೊಳ್ಳಿ.
 
ಈ ಸಲಹೆಗಳನ್ನು ನೀವು ಒಮ್ಮೆ ಪ್ರಯತ್ನಿಸುವ ಮೂಲಕ ಬದಲಾವಣೆಯನ್ನು ಗಮನಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ