ಮನೆ ಮುಂದೆ ನೆಟ್ಟ ತುಳಸಿಗಿಡ ಒಣಗುವುದಕ್ಕೆ ಈ ದೋಷಗಳು ಕಾರಣಗಳಿರಬಹುದು!

ಗುರುವಾರ, 22 ನವೆಂಬರ್ 2018 (09:19 IST)
ಬೆಂಗಳೂರು: ಹಿಂದೂ ಸಂಪ್ರದಾಯ ಪರಿಪಾಲಿಸುವ ಎಲ್ಲರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಮನೆ ಮುಂದೆ ನೆಟ್ಟ ತುಳಸಿ ಗಿಡ ಹೆಚ್ಚು ದಿನ ಉಳಿಯುವುದಿಲ್ಲ, ಒಣಗುತ್ತದೆ ಎನ್ನುವುದಕ್ಕೆ ಕಾರಣಗಳೇನು ಗೊತ್ತಾ?

ಕುಂಡದಲ್ಲಿ ಹಾಕಿದರೆ ತುಳಸಿ ಗಿಡ ಅಷ್ಟು ಬೆಳವಣಿಗೆ ಆಗುವುದಿಲ್ಲ. ಅದರ ಬೇರುಗಳಿಗೆ ಹರಡುವುದಕ್ಕೆ ಅವಕಾಶವಿಲ್ಲದಾಗ ಬೇಗನೇ ಒಣಗುತ್ತದೆ.

ತುಳಸಿ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು. ಹಾಗೆಯೇ ತುಳಸಿ ಗಿಡವನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗನೇ ಒಣಗುವುದು.

ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸಿ ಗಿಡ ಒಣಗುವುದು. ತುಳಸಿ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ನಶಿಸಿ ಒಣಗುತ್ತದೆ. ಮನೆ ಮೇಲೆ ದುಷ್ಟ ಗ್ರಹ ಪ್ರಭಾವ ಬೀರಿದಾಗ, ದೃಷ್ಟಿಯಾದಾಗ ತುಳಸಿ ಅದನ್ನು ತಡೆಯುವುದು. ಹೀಗಾಗಿ ಅದು ತಾನು ಒಣಗಿ ನಿಮ್ಮನ್ನು ರಕ್ಷಿಸುವುದು.

ತುಳಸಿ ಗಿಡ  ಒಣಗುತ್ತಿದೆ ಎಂದಾದರೆ ಮೃತ್ತಿಕೆಯನ್ನು ತಂದು ತುಳಸಿ ಗಿಡದಲ್ಲಿ ಹಾಕಿ, ಚೆನ್ನಾಗಿ ಬೆಳೆಯುತ್ತದೆ. ಪ್ರತೀ ದಿನ ತುಳಸಿ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ. ತುಳಸಿ ಗಿಡದ ಮುಂದೆ ಪ್ರತಿ ನಿತ್ಯ ದೀಪ ಹಚ್ಚುವುದರಿಂದ ಮನೆಗೆ ದುಷ್ಟ ಕಾಟ ತಟ್ಟದು. ತುಳಸಿ ಬಿಡಿಸುವಾಗ ವಿಷ್ಣು ಪರಮಾತ್ಮರಲ್ಲಿ ಕ್ಷಮೆ ಕೋರಿ, ಗಿಡವನ್ನು ಅಳ್ಳಾಡಿಸಿ, ಒಣಗಿದ ಎಲೆಯೆಲ್ಲಾ ಉದುರಿದ ಮೇಲೆ ತುಳಸಿಯನ್ನು ಬಿಡಿಸಿ. ನೀವು ತುಳಸಿ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ ಬ್ರಹ್ಮ ಹತ್ಯಾ ದೋಷ ಬರದು! ಹಾಗೆಯೇ ನೆಲಕ್ಕೆ ಬಿದ್ದ ತುಳಸಿಯನ್ನು ಪೂಜಿಸಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ