ಸಾವಿನ ನಾಟಕವಾಡಿದ್ದಕ್ಕೆ ಪೂನಂ ಪರ ಕ್ಷಮೆ ಕೇಳಿದ ತಂಡ

Krishnaveni K

ಮಂಗಳವಾರ, 6 ಫೆಬ್ರವರಿ 2024 (17:05 IST)
ಮುಂಬೈ: ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಾವಿನ ಸುಳ್ಳು ಸುದ್ದಿ ಪ್ರಕಟಿಸಿದ್ದ ನಟಿ ಪೂನಂ ಪಾಂಡೆ ಪರವಾಗಿ ಅವರ ಡಿಜಿಟಲ್ ತಂಡ ಕ್ಷಮೆ ಯಾಚಿಸಿದೆ.

ಇತ್ತೀಚೆಗೆ ಪೂನಂ ಇನ್ ಸ್ಟಾಗ್ರಾಂ ಪುಟದಲ್ಲಿ ಅವರ ಮ್ಯಾನೇಜರ್ ಪೂನಂ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಸಂದೇಶ ಬರೆದಿದ್ದರು. ಇದು ಮಾಧ್ಯಮ, ಫ್ಯಾನ್ಸ್, ಸಮೀಪವರ್ತಿಗಳಿಗೆ ಶಾಕ್ ನೀಡಿತ್ತು. ಚೆನ್ನಾಗಿಯೇ ಇದ್ದ ಪೂನಂ ಇದ್ದಕ್ಕಿದ್ದಂತೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದರೆ ಯಾರೂ ನಂಬಲು ಸಿದ್ಧರಿರಲಿಲ್ಲ.

ಆದರೆ ಮರುದಿನವೇ ವಿಡಿಯೋ ಮೂಲಕ ಇನ್ ಸ್ಟಾದಲ್ಲಿ ಕಾಣಿಸಿಕೊಂಡ ಪೂನಂ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಸಾವಿನ ನಾಟಕವಾಡಿದ್ದಾಗಿ ಸ್ಪಷ್ಟನೆ ನೀಡಿದ್ದರು. ಆದರೆ ತಮ್ಮ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹರಡಿದ್ದ ಪೂನಂ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ನೆಟ್ಟಿಗರು ಅವರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದರು. ಇದರ ಬೆನ್ನಲ್ಲೇ ಪೂನಂ ಹಣ ಪಡೆದು ಈ ರೀತಿ ಸುಳ್ಳು ಹೇಳಿದ್ದಾರೆ ಎಂದೂ ಆರೋಪ ಕೇಳಿಬಂದಿತ್ತು. ಸುಳ್ಳು ಸುದ್ದಿ ಹರಡಿಸಿ ಜನರನ್ನು ದಾರಿ ತಪ್ಪಿಸಿದ್ದಕ್ಕೆ ಪೂನಂ ವಿರುದ್ಧ ದೂರು ದಾಖಲಿಸಬೇಕೆಂದು ಸಿನಿ ಕಾರ್ಮಿಕರ ಸಂಘ ಒತ್ತಾಯಿಸಿತ್ತು.

ಇದೀಗ ಘಟನೆ ಬಗ್ಗೆ ಪೂನಂ ಪರವಾಗಿ ಅವರ ಡಿಜಿಟಲ್ ತಂಡ ಕ್ಷಮೆ ಯಾಚಿಸಿದೆ. ನಮ್ಮ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ಅದಕ್ಕಾಗಿ ಆಯ್ಕೆ ಮಾಡಿಕೊಂಡ  ದಾರಿ ಸರಿಯಾಗಿರಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಸಂದೇಶ ಬರೆಯಲಾಗಿದೆ. ಪೂನಂ ವಿರುದ್ಧ ವಕೀಲರೊಬ್ಬರು ದೂರೂ ಸಲ್ಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕ್ಷಮೆ ಯಾಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ