ಏಷ್ಯಾ ಕಪ್ ಫೈನಲ್: ಸಿರಾಜ್ ದಾಳಿಗೆ ತರಗೆಲೆಗಳಂತಾದ ಶ್ರೀಲಂಕಾ ಬ್ಯಾಟರ್ಸ್

ಭಾನುವಾರ, 17 ಸೆಪ್ಟಂಬರ್ 2023 (16:34 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ತಂಡಕ್ಕೆ ಕನಸಿನ ಆರಂಭ ನೀಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಶ್ರೀಲಂಕಾ ಮೊಹಮ್ಮದ್ ಸಿರಾಜ್ ದಾಳಿಗೆ ನಲುಗಿ 12 ರನ್ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ!

ಮೊದಲ ಓವರ್ ನಲ್ಲೇ ಲಂಕಾ 1 ರನ್ ಗಳಿಸಿದ್ದಾಗ ಕುಸಲ್ ಪರೇರಾ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ರಿಯಲ್ ಗೇಮ್ ಶುರುವಾಗಿದ್ದು ಮೊಹಮ್ಮದ್ ಸಿರಾಜ್ ಓವರ್ ನಲ್ಲಿ. ಬೆನ್ನು ಬೆನ್ನಿಗೆ ನಿಸಂಕಾ (2), ಸಮರವಿಕ್ರಮ (0), ಚರಿತ ಅಸಲಂಕ (0), ಧನಂಜಯ ಡಿಸಿಲ್ವ (4), ದಸನು ಶಣಕ (0) ರನ್ನು ಪೆವಿಲಿಯನ್ ಗಟ್ಟಿದ ಸಿರಾಜ್ ಅಕ್ಷರಶಃ ಡ್ರೀಮ್ ಸ್ಪೆಲ್ ಎಸೆದರು. ಇಂತಹದ್ದೊಂದು ಆರಂಭವನ್ನು ನೋಡಿ ವೀಕ್ಷಕರು ಇದು ಕನಸೋ, ನನಸೋ ಎಂದು ಅರಿಯದಾದರು.

ಇದೀಗ ಕ್ರೀಸ್ ನಲ್ಲಿ 17 ರನ್ ಗಳಿಸಿರುವ ಕುಸಲ್ ಮೆಂಡಿಸ್ ಮತ್ತು 4 ರನ್ ಗಳಿಸಿರುವ ವೆಲಲ್ಲಾಗೆ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶ್ರೀಲಂಕಾ 9 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ಮೊಹಮ್ಮದ್ ಸಿರಾಜ್ 15 ಎಸೆತಗಳೊಳಗೇ 5 ವಿಕೆಟ್ ಕಬಳಿಸಿ ಹೊಸ ದಾಖಲೆಯನ್ನೇ ಬರೆದರು. ಅಲ್ಲದೆ ಏಕದಿನ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ 5 ಪ್ಲಸ್ ವಿಕೆಟ್ ಕಳೆದುಕೊಂಡ ತಂಡಗಳ ಪಟ್ಟಿಯಲ್ಲಿ ಲಂಕಾ ಎರಡನೇ ಸ್ಥಾನ ಪಡೆದ ಕುಖ್ಯಾತಿಗೊಳಗಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ