ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

Sampriya

ಸೋಮವಾರ, 4 ಆಗಸ್ಟ್ 2025 (17:04 IST)
Photo Credit X
ಲಂಡನ್‌: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಾಟದಲ್ಲಿ ಅಮೋಘ ಪ್ರದರ್ಶನದ ಮೂಲಕ ಭಾರತ ಇನ್ನೇನು ಕಳೆದುಕೊಳ್ಳುತ್ತಿದ್ದ ಗೆಲುವನ್ನು ಕೊನೆ ಕ್ಷಣದಲ್ಲಿ ಬಾಚಿಕೊಳ್ಳುವ ಮೂಲಕ ಐತಿಹಾಸಿಕ ಕ್ಷಣವನ್ನು ನಿರ್ಮಿಸಿತು. 

 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ  ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.

ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಂಗ್ಲರ ಪಡೆ ಇನ್ನೇನು 8ರನ್ ಗಳಿಸಿ ಗೆಲುವಿನ ದಡ ಸೇರುವಷ್ಟರಲ್ಲಿ ಸಿರಾಜ್ ಬೆಂಕಿಯ ಎಸೆತಕ್ಕೆ ವಿಕೆಟ್ ಕಳೆದುಕೊಂಡು ಭಾರತ 6 ರನ್‌ ಅಂತರದ ಜಯ ಸಾಧಿಸಿತು.

ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌, 106 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ 'ಟೆಸ್ಟ್‌ ಪರಿಣತ' ಬ್ಯಾಟರ್‌ಗಳಾದ ಜೋ ರೂಟ್‌ (105 ರನ್‌) ಮತ್ತು ಹ್ಯಾರಿ ಬ್ರೂಕ್‌ (111) ರನ್ ಗಳಿಸಿ ಟೀಂ ಇಂಡಿಯಾಗೆ ದೊಡ್ಡ ತಲೆನೋವಾದರು. 

4ನೇ ವಿಕೆಟ್‌ ಪಾಲುದಾರಿಕೆಯಲ್ಲಿ 195 ರನ್‌ ಕೂಡಿಸಿದ ಈ ಇಬ್ಬರೂ ಸೋಲಿನ ಭೀತಿ ಮೂಡಿಸಿದ್ದರು. ಶುಭಮನ್‌ ಗಿಲ್‌ ಪಡೆ ನೀಡಿದ ಜೀವದಾನಗಳೂ ಅವರಿಗೆ ನೆರವಾದವು.

ನಾಲ್ಕನೇ ದಿನದ ಆರಂಭದಲ್ಲೇ ಜೆಮೀ ಸ್ಮಿತ್‌ ಹಾಗೂ ಜೆಮೀ ಓವರ್ಟನ್ ಅವರನ್ನು ಸಿರಾಜ್‌ ಪೆವಿಲಿಯನ್‌ ಕಡೆ ಬೇಗನೇ ಕಳುಹಿಸಿದರು. ಜೋಶ್‌ ಟಂಗ್‌ ಅವರನ್ನು ಪ್ರಸಿದ್ಧ ಕೃಷ್ಣ ಕ್ಲೀನ್‌ ಬೌಲ್ಡ್‌ ಮಾಡಿದರು. ಹೀಗಾಗಿ, ಗಾಯಾಳು ಕ್ರಿಸ್‌ ವೋಕ್ಸ್‌ ಕ್ರೀಸ್‌ಗಿಳಿಯಬೇಕಾಯಿತು. 

ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್‌ 5 ವಿಕೆಟ್‌ ಕಬಳಿಸಿದರೆ, ಪ್ರಸಿದ್ಧ ಕೃಷ್ಣ ನಾಲ್ಕು ಮತ್ತು ಆಕಾಶ್ ದೀಪ್‌ ಒಂದು ವಿಕೆಟ್‌ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ