ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಸಿಡ್ನಿ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮೊದಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಯ ಕಾಡುತ್ತಿದೆ.
ಈಗಾಗಲೇ ಸರಣಿ ಸೋತಿರುವ ಭಾರತಕ್ಕೆ ಈ ಪಂದ್ಯವನ್ನು ಗೆದ್ದು ವೈಟ್ ವಾಶ್ ಅವಮಾನ ತಪ್ಪಿಸುವ ಅನಿವಾರ್ಯತೆಯಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಳಿ ತಪ್ಪಿತ್ತು. ಆಸೀಸ್ ವಿರುದ್ಧ ಗೆಲ್ಲಬೇಕಾದರೆ ಬ್ಯಾಟಿಂಗ್ ಸುಧಾರಿಸಬೇಕಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲಿಗೆ ಇದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಬಹುದೇ ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಯಾಕೆಂದರೆ ಕಳೆದ ಪಂದ್ಯದಲ್ಲೂ ಸತತ ಎರಡನೇ ಬಾರಿಗೆ ಶೂನ್ಯಕ್ಕೆ ಔಟಾದ ಬಳಿಕ ಕೊಹ್ಲಿ ಬ್ಯಾಟ್, ಗ್ಲೌಸ್ ಮೇಲೆತ್ತಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಇದು ಅವರ ಕೊನೆಯ ಸರಣಿಯಾಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.
ಇನ್ನೊಂದೆಡೆ ಕೋಚ್ ಗೌತಮ್ ಗಂಭೀರ್ ಇಂದು ನಿಮ್ಮ ವಿದಾಯದ ಪಂದ್ಯ ರೋಹಿತ್ ಗೆ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಹೀಗಾಗಿ ಇಬ್ಬರಿಗೂ ಇದೇ ಕೊನೆಯ ಪಂದ್ಯವಾಗಿರಬಹುದೇ, ಇನ್ನು ನಮ್ಮ ನೆಚ್ಚಿನ ರೋ-ಕೊ ಜೋಡಿಯನ್ನು ಮೈದಾನದಲ್ಲಿ ಒಟ್ಟಿಗೇ ನೋಡಲು ಸಾಧ್ಯವಿಲ್ಲವೇ ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.