ತನ್ನ ತಪ್ಪಿಗೆ ತಾನೇ ಬೆಲೆ ತೆತ್ತ ವಿರಾಟ್ ಕೊಹ್ಲಿ

ಗುರುವಾರ, 22 ಫೆಬ್ರವರಿ 2018 (09:07 IST)
ಸೆಂಚೂರಿಯನ್: ಗೆಲುವಿನ ಹುಮ್ಮಸ್ಸಿನಲ್ಲಿ ಮೈ ಮರೆತಿದ್ದ ಭಾರತಕ್ಕೆ ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ಶಾಕ್ ನೀಡಿದೆ. ಪ್ರಮುಖ ಬೌಲರ್ ಗಳಿಲ್ಲದೇ ಕಣಕ್ಕಿಳಿದ ಟೀಂ ಇಂಡಿಯಾಗೆ 6 ವಿಕೆಟ್ ಗಳಿಂದ ಸೋಲುಣಿಸಿದೆ.
 

ನಿನ್ನೆಯ ಪಂದ್ಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಹೊರಗಿಟ್ಟಿದ್ದು ವಿರಾಟ್ ಕೊಹ್ಲಿ ಪಶ್ಚಾತ್ತಾಪ ಪಡುವಂತಾಯಿತು. ಸರಣಿಯಲ್ಲಿ ಇವರಿಬ್ಬರೂ ಎದುರಾಳಿಗಳನ್ನು ಸಾಕಷ್ಟು ಕಾಡಿದ್ದರು.

ಹೀಗಿರುವಾಗ ಪ್ರಮುಖ ಪಂದ್ಯಕ್ಕೇ ಇವರನ್ನು ಹೊರಗಿಟ್ಟು ಅತಿಯಾದ ಆತ್ಮವಿಶ್ವಾಸ ತೋರಿಸಿದ್ದು ಕೊಹ್ಲಿಗೆ ಮುಳುವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎಂದಿನಂತೆ ರೋಹಿತ್ ಶರ್ಮಾ ಶೂನ್ಯಕ್ಕೆ ಆಘಾತ ನೀಡಿದರೆ ಶಿಖರ್ ಧವನ್, ವಿರಾಟ್ ಕೊಹ್ಲಿ ಇಬ್ಬರೂ ವಿಫಲರಾದರು. ಆದರೆ ಕೊನೆಯಲ್ಲಿ ಕರ್ನಾಟಕದ ಮನೀಶ್ ಪಾಂಡೆ ಮತ್ತು ಧೋನಿ ಅಬ್ಬರದ ಜತೆಯಾಟವಾಡಿದರು.

ಈ ಜೋಡಿ 5 ನೇ ವಿಕೆಟ್ ಗೆ 56 ಎಸೆತದಲ್ಲಿ 98 ರನ್ ಜತೆಯಾಟವಾಡಿ ಮೊತ್ತ 188 ಕ್ಕೇರಿಸಲು ನೆರವಾದರು. ಪಾಂಡೆ 79 ರನ್ ಸಿಡಿಸಿದರೆ ಧೋನಿ 52 ರನ್ ಗಳಿಸಿದರು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ ಆರಂಭದಲ್ಲಿ ಕುಸಿತ ಕಂಡರೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಡುಮಿನಿ ಮತ್ತು ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಬ್ಯಾಟಿಂಗ್ ನಡೆಸಿ 18.4 ಓವರ್ ಗಳಲ್ಲೇ ಗುರಿ ಮುಟ್ಟಲು ನೆರವಾದರು. ಇದೀಗ ಸರಣಿ 1-1 ರಿಂದ ಸಮಬಲಗೊಂಡಿದ್ದು ಅಂತಿಮ ಪಂದ್ಯ ನಿರ್ಣಾಯಕವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ