ಅಹಮದಾಬಾದ್: 2025ನೇ ಸಾಲಿನ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಪಂಜಾಬ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವವಹಿಸಿದ ಶ್ರೇಯಸ್ ಅಯ್ಯರ್ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಂಬೈ ವಿರುದ್ಧ ಅಮೋಘ ಜಯ ಸಾಧಿಸಿದರು ಶ್ರೇಯಸ್ ಅಯ್ಯರ್ ಮಾತ್ರ ಯಾವುದೇ ಖುಷಿ ವ್ಯಕ್ತಪಡಿಸಿಲ್ಲ. ಅರ್ಧಶತಕ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಮಹತ್ತರ ಪಂದ್ಯಗಳಲ್ಲಿ ಅತ್ಯಂತ ಒತ್ತಡದಲ್ಲಿ ಆಡಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.
ಶ್ರೇಯಸ್ ಬಿರುಸಿನ ಅರ್ಧಶತಕದ ಬಲದಿಂದ ಮುಂಬೈ ಒಡ್ಡಿದ 204 ರನ್ಗಳ ಗುರಿಯನ್ನು ಪಂಜಾಬ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಭರ್ಜರಿ ಜಯ ಸಾಧಿಸಿತು.
ನಾಯಕನ ದೊಡ್ಡ ಜವಾಬ್ದಾರಿಯಲ್ಲಿ ಗ್ರೌಂಡ್ಗಿಳಿದ ಅಯ್ಯರ್ ಕೇವಲ 41 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ ಅಜೇಯ 87 ರನ್ ಗಳಿಸಿ ತಮ್ಮ ತಂಡವನ್ನು ಪೈನಲ್ಗೆ ಹೊತ್ತೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ತಾಳ್ಮೆ ಕಾಯ್ದುಕೊಳ್ಳುತ್ತೀರಿ ಎಂದು ಕೇಳಿದಾಗ, 'ಪ್ರಾಮಾಣಿಕವಾಗಿ ನನಗೆ ಗೊತ್ತಿಲ್ಲ, ಆದರೆ ದೊಡ್ಡ ವೇದಿಕೆಗಳನ್ನು ಇಷ್ಟಪಡುತ್ತೇನೆ. ಮಹತ್ತರ ಪಂದ್ಯಗಳಲ್ಲಿ ಶಾಂತಚಿತ್ತರಾಗಿ ಇದ್ದಷ್ಟು ನಿಮಗೆ ಬೇಕಾದ ಫಲಿತಾಂಶ ಸಿಗುತ್ತದೆ ಎಂದು ಸದಾ ನನ್ನ ಸಹ ಆಟಗಾರರಿಗೆ ಹೇಳುತ್ತಿರುತ್ತೇನೆ' ಎಂದು ಅಯ್ಯರ್ ಹೇಳಿದ್ದಾರೆ.