ಕೆಎಲ್ ರಾಹುಲ್ ಈ ಕಾರಣಕ್ಕೆ ಆರ್ ಸಿಬಿಗೆ ಬರೋದು ಇನ್ನು ಡೌಟು ಅಂತಿದ್ದಾರೆ ಫ್ಯಾನ್ಸ್

Krishnaveni K

ಮಂಗಳವಾರ, 27 ಆಗಸ್ಟ್ 2024 (10:15 IST)
Photo Credit: X
ನವದೆಹಲಿ: ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ರನ್ನು ಆರ್ ಸಿಬಿ ಖರೀದಿಸಲಿದೆ ಮತ್ತು ಅವರು ನಾಯಕರಾಗಲಿದ್ದಾರೆ ಎಂದು ಅಂದುಕೊಂಡಿದ್ದ ಫ್ಯಾನ್ಸ್ ಗೆ ಯಾಕೋ ನಿರಾಸೆಯಾಗುವಂತಿದೆ.

ನಿನ್ನೆಯಷ್ಟೇ ಕೆಎಲ್ ರಾಹುಲ್ ದೆಹಲಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮಾಲಿಕ ಸಂಜೀವ್ ಗೊಯೆಂಕಾ ಕಚೇರಿಗೆ ತೆರಳಿ ಅಲ್ಲಿ ಅವರನ್ನು ಭೇಟಿ ಮಾಡಿದ್ದರು. ಮಾತುಕತೆ ಬಳಿಕ ಇಬ್ಬರೂ ಜೊತೆಯಾಗಿ ಫೋಟೋ ತೆಗೆಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂದಿನ ಐಪಿಎಲ್ ಗೆ ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಬೇಕು, ಯಾರನ್ನು ಕೈ ಬಿಡಬೇಕು ಎಂದು ಚರ್ಚೆ ನಡೆಸುತ್ತಿರುವಾಗಲೇ ರಾಹುಲ್ ಈ ರೀತಿ ಸಂಜೀವ್ ಗೊಯೆಂಕಾರನ್ನು ಭೇಟಿಯಾಗಿದ್ದು ನೋಡಿದರೆ ಅವರು ಲಕ್ನೋ ಬಿಡುವುದು ಅನುಮಾನ ಎನ್ನಲಾಗುತ್ತಿದೆ.

ಲಕ್ನೋಗೆ ಮುಂದಿನ ಸೀಸನ್ ಗೆ ಜಹೀರ್ ಖಾನ್ ರನ್ನು ಮೆಂಟರ್ ಆಗಿ ಕರೆತರಲು ಮಾತುಕತೆ ನಡೆಯುತ್ತಿದೆಯಂತೆ. ತಂಡದಲ್ಲಿ ಮುಂದಿನ ಸೀಸನ್ ಗೆ ಯಾರನ್ನು ಉಳಿಸಬೇಕು, ಯಾರನ್ನು ಕೈ ಬಿಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಕೆಎಲ್ ರಾಹುಲ್ ಮಾಲಿಕರನ್ನು ಭೇಟಿಯಾಗಿರಬಹುದು ಎನ್ನಲಾಗುತ್ತಿದೆ. ಇಬ್ಬರೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ರಾಹುಲ್ ಫೋಟೋ ನೋಡಿ ಆರ್ ಸಿಬಿ ಅಭಿಮಾನಿಗಳಿಗಂತೂ ನಿರಾಸೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ