ಕೆಣಕಿದ ಕ್ರಾಲಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್‌ ಸಿರಾಜ್‌: ಕುತೂಹಲಕರ ಘಟ್ಟದತ್ತ ಐದನೇ ಟೆಸ್ಟ್‌

Sampriya

ಭಾನುವಾರ, 3 ಆಗಸ್ಟ್ 2025 (12:41 IST)
Photo Credit X
ಲಂಡನ್: ಇಲ್ಲಿನ ಓವಲ್‌ನಲ್ಲಿ ನಡೆಯುತ್ತಿರುವ ನಿರ್ಣಾಯಕ ಮತ್ತು ಕೊನೆಯ ಟೆಸ್ಟ್‌ ಪಂದ್ಯ ಕುತೂಹಲಕರ ಘಟ್ಟದತ್ತ ಸಾಗಿದೆ.  ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲ ಮಾಡಲು ಭಾರತ ಪ್ರಯತ್ನಿಸುತ್ತಿದೆ. 

ಭಾರತ ನೀಡಿದ 374 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇನ್ನೂ ಒಂಬತ್ತು ವಿಕೆಟ್‌ ಬೇಕಾಗಿದೆ. ಅತ್ತ ಇಂಗ್ಲೆಡ್‌ಗೆ ಗೆಲ್ಲಲು ಇನ್ನೆರಡು ದಿನ ಉಳಿದಿರುವಂತೆಯೇ 324 ರನ್ ಗಳಿಸಬೇಕಿದೆ.

ಆತಿಥೇಯ ತಂಡಕ್ಕೆ ಓಪನರ್‌ಗಳಾದ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಎರಡನೇ ಇನಿಂಗ್ಸ್‌ನಲ್ಲಝೂ ಉತ್ತಮ ಆರಂಭವೊದಗಿಸಿದರು. ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು. ದಿನದಂತ್ಯದ ವೇಳೆ ಸಮಯವನ್ನು ವ್ಯರ್ಥ ಮಾಡುವ ನಿಟ್ಟಿನಲ್ಲಿ ಕ್ರಾಲಿ ತಮ್ಮ ಎಂದಿನ ತಂತ್ರ ಹೆಣೆದರು. 14ನೇ ಓವರ್‌ನಲ್ಲಿ ಸಿರಾಜ್ ರನ್ ಅಪ್ ತೆಗೆದುಕೊಂಡರೂ ಕ್ರೀಸಿನಿಂದ ಆಚೆ ಹೋದ ಕ್ರಾಲಿ ಭಾರತಕ್ಕೆ ಇನ್ನೊಂದು ಓವರ್ ಎಸೆಯುವ ಅವಕಾಶ ನಿರಾಕರಿಸಿದರು.

ಆದರೆ ಲಾರ್ಡ್ಸ್ ಪಂದ್ಯದಂತೆ ಈ ಬಾರಿ ಸಿರಾಜ್ ಅಥವಾ ನಾಯಕ ಶುಭಮನ್ ಗಿಲ್ ಸಿಟ್ಟುಗೊಂಡಿಲ್ಲ. ಬದಲಾಗಿ ಕ್ರಾಲಿ ಅವರನ್ನು ನೋಡುತ್ತಲೇ ಮಂದಹಾಸ ಬೀರಿದರು. ಕ್ರಾಲಿ ಕೂಡ ತಮ್ಮ ತಂತ್ರ ಫಲಿಸಿತು ಎಂಬಂತೆ ನಗುಮುಖ ಬೀರಿದರು. ಆದರೆ, ಭಾರತದ ತಂತ್ರ ಬೇರೆಯೇ ಆಗಿತ್ತು. ಕೊನೆಯ ಎಸೆತವನ್ನು ಶಾರ್ಟ್ ಪಿಚ್‌‌ಗೆ ಅನುಗುಣವಾಗಿ ಕ್ಷೇತ್ರ ರಕ್ಷಣೆಯನ್ನು ಸೆಟ್ ಮಾಡಿದರು. ಕ್ರಾಲಿ ಕೂಡ ಸಿರಾಜ್ ಅವರಿಂದ ಬೌನ್ಸರ್ ದಾಳಿಯನ್ನು ನಿರೀಕ್ಷೆ ಮಾಡಿದ್ದರು.

ಆದರೆ ನೇರವಾಗಿ ಯಾರ್ಕರ್ ದಾಳಿ ಮಾಡಿದ ಸಿರಾಜ್, ಕ್ರಾಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಭಾರತೀಯ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.  ಅತ್ತ ಕ್ರಾಲಿ ತಲೆ ತಗ್ಗಿಸುತ್ತಲೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. 

ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ ತಂಡವು ಈಗಾಗಲೇ 2–1 ಮುನ್ನಡೆಯಲ್ಲಿದೆ. ಈ ಪಂದ್ಯ ಗೆದ್ದರೆ ಇಂಗ್ಲೆಂಡ್ ತಂಡ 3–1ರಿಂದ ಸರಣಿ ವಶ ಮಾಡಲಿದೆ. ಆದರೆ. ಭಾರತ ಗೆದ್ದರೆ ಸರಣಿಯು ಸಮಬಲವಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ