ಟಿ20 ವಿಶ್ವಕಪ್: ರನೌಟ್ ಮೂಲಕ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟ ಕೆಎಲ್ ರಾಹುಲ್

ಬುಧವಾರ, 2 ನವೆಂಬರ್ 2022 (17:48 IST)
Photo Courtesy: Twitter
ಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ಇಂದು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯವನ್ನು ಟೀಂ ಇಂಡಿಯಾ 6 ರನ್ ಗಳಿಂದ ಗೆದ್ದುಕೊಂಡಿದೆ.

ಮಳೆಯಿಂದಾಗಿ 16 ಓವರ್ ಗೆ ಪಂದ್ಯ ಕಡಿತಗೊಂಡಿತು. ಇದರಿಂದಾಗಿ ಬಾಂಗ್ಲಾ 16 ಓವರ್ ಗಳಲ್ಲಿ 151 ರನ್ ಗಳಿಸಬೇಕಾಯಿತು. ಮಳೆಗೆ ಮೊದಲು ಬಾಂಗ್ಲಾ 7 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 60 ರನ್ ಗಳಿಸಿತ್ತು. ಲಿಟನ್ ದಾಸ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ಬಾಂಗ್ಲಾ ಗೆಲುವಿನ ಕನಸಿನಲ್ಲಿತ್ತು.

ಆದರೆ ಮಳೆಯ ನಂತರ ಆಟ ಆರಂಭವಾದಾಗ ಮೊದಲ ಓವರ್ ನಲ್ಲಿಯೇ ಕೆಎಲ್ ರಾಹುಲ್ ಎಸೆದ ನೇರ ಎಸೆತವೊಂದರಿಂದಾಗಿ ಲಿಟನ್ ದಾಸ್ ರನೌಟ್ ಆದರು. ಈ ಎಸೆತ ಪಂದ್ಯಕ್ಕೆ ತಿರುವು ನೀಡಿತು. ಬಳಿಕ ನಿಯಮಿತವಾಗಿ ಬೌಲರ್ ಗಳು ವಿಕೆಟ್ ಗಳಿಸುತ್ತಾ ಸಾಗಿದರು. ಅದರಲ್ಲೂ ಮೊಹಮ್ಮದ್ ಶಮಿ, ಅರ್ಷ್ ದೀಪ್ ಸಿಂಗ್ ಅತ್ಯುತ್ತಮ ಸ್ಪೆಲ್ ನಿಭಾಯಿಸಿದರು. ಶಮಿ 1 ವಿಕೆಟ್, ಅರ್ಷ್ ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ ಕೂಡಾ 2 ವಿಕೆಟ್ ಕಬಳಿಸಿದರು. ಅಂತಿಮವಾಗಿ ಬಾಂಗ್ಲಾ 16 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ