WPL 2025: ಆರ್ ಸಿಬಿ ಇಂದು ಎರಡು ಕಾರಣಕ್ಕೆ ಗೆಲ್ಲಲೇಬೇಕು

Krishnaveni K

ಶನಿವಾರ, 1 ಮಾರ್ಚ್ 2025 (10:27 IST)
ಬೆಂಗಳೂರು: ಡಬ್ಲ್ಯುಪಿಎಲ್ 2025 ರಲ್ಲಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಆರ್ ಸಿಬಿ ಎರಡು ಕಾರಣಗಳಿಗೆ ಗೆಲ್ಲಲೇಬೇಕಾಗಿದೆ.

ವಡೋದರಾದಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಆರ್ ಸಿಬಿ ತವರಿಗೆ ಬಂದ ಕೂಡಲೇ ಟುಸ್ ಪಠಾಕಿಯಾಗಿತ್ತು. ದುರಾದೃಷ್ಟವೆಂದರೆ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಮೂರೂ ಪಂದ್ಯಗಳನ್ನು ಸೋತಿದೆ. ಇದರಿಂದ ತವರಿನ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

ಇಂದು ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಬೆಂಗಳೂರಿನಲ್ಲಿ ಕೊನೆಯ ಪಂದ್ಯವಾಡಲಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ 2025 ರ ಪಂದ್ಯ ಅಂತ್ಯವಾಗಲಿದೆ. ತವರಿನಲ್ಲಿ ಆರ್ ಸಿಬಿ ಒಂದೇ ಒಂದು ಪಂದ್ಯ ಗೆಲ್ಲದೇ ನಿರಾಸೆಗೊಂಡಿರುವ ಅಭಿಮಾನಿಗಳ ಮನರಂಜಿಸಲು ಆರ್ ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಇನ್ನೊಂದೆಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿರುವ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಸತತ ಮೂರು ಪಂದ್ಯಗಳ ಸೋಲಿನ ನಂತರ ಆರ್ ಸಿಬಿ ಪ್ಲೇ ಆಫ್ ಹಾದಿ ಕಷ್ಟವಾಗಿದೆ. ಇಂದಿನ ಪಂದ್ಯವನ್ನೂ ಸೋತರೆ ಆರ್ ಸಿಬಿ ಅಭಿಯಾನ ಕೊನೆಯಾಗಲಿದೆ.  ಈ ಕಾರಣಕ್ಕೆ ಇಂದು ಸ್ಮೃತಿ ಮಂಧನಾ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಪ್ರಬಲ ತಂಡವೆನಿಸುತ್ತಿದೆ. ಎಲ್ಲಾ ತಂಡವನ್ನೂ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಇಂದು ಆರ್ ಸಿಬಿ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ