ಅನಿಲ್ ಕುಂಬ್ಳೆಗೆ ಪತ್ರ ಬರೆದ ಹರ್ಭಜನ್ ಸಿಂಗ್! ಏನಿತ್ತು ಅದರಲ್ಲಿ?

ಗುರುವಾರ, 18 ಮೇ 2017 (06:47 IST)
ಮುಂಬೈ: ಒಂದು ಕಾಲದಲ್ಲಿ ಭಾರತ ತಂಡವನ್ನು ಆಳಿದ್ದ ಹರ್ಭಜನ್ ಸಿಂಗ್ ಇದೀಗ ಅವಕಾಶಕ್ಕಾಗಿ ಪರದಾಡುವಂತಾಗಿದೆ. ಹಾಗಾಗಿ ತಮ್ಮಂತೇ ದೇಶೀಯ ಪಂದ್ಯಗಳಲ್ಲಿ ಆಡುವವರ ಕಷ್ಟವೂ ಅವರಿಗೆ ಅರಿವಾಗಿದೆ.

 
ಹೀಗಾಗಿ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ದೇಶೀ ಕ್ರಿಕೆಟಿಗರ ಹಣಕಾಸಿನ ಸಮಸ್ಯೆಯ ಬಗ್ಗೆ ಬಿಸಿಸಿಐ ಗಮನಕ್ಕೆ ತರುವಂತೆ ಪತ್ರ ಬರೆದಿದ್ದಾರೆ. ಮೇ 21 ರಂದು ಕುಂಬ್ಳೆ ಬಿಸಿಸಿಐನ ಆಡಳತಾಧಿಕಾರಿಗಳ ಎದುರು ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಲಿದ್ದಾರೆ.

ಈ ಸಂದರ್ಭದಲ್ಲಿ ದೇಶೀಯ ಕ್ರಿಕೆಟಿಗರ ವೇತನ ಸಮಸ್ಯೆಯ ಬಗ್ಗೆ ಗಮನಹರಿಸುವಂತೆ ಭಜಿ ಕುಂಬ್ಳೆಗೆ ಮನವಿ ಮಾಡಿದ್ದಾರೆ. ದೇಶೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಕೇವಲ 1.5 ಲಕ್ಷ ರೂ. ಸಂಭಾವನೆ ಸಿಗುತ್ತಿದೆಯಷ್ಟೇ.

ಈ ಬಗ್ಗೆ ಕುಂಬ್ಳೆಗೆ ಭಾವನಾತ್ಮವಾಗಿ ಪತ್ರ ಬರೆದಿರುವ ಭಜಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ಕಳೆದ ಎರಡು ಮೂರು ವರ್ಷಗಳಿಂದ ರಣಜಿ ಆಡುವವನಾಗಿ ನನ್ನ ಸಹ ಆಟಗಾರರು ಹಣಕಾಸಿನ ವಿಚಾರಕ್ಕೆ ಪರದಾಡುವುದನ್ನು ನೋಡಿದ್ದೇನೆ. ದಯಮಾಡಿ ಇವರ ಸಮಸ್ಯೆಯತ್ತ ಬಿಸಿಸಿಐ ಗಮನಹರಿಸುವಂತೆ ಮಾಡಿ’ ಎಂದು ಭಜಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ