ಹೋಟೆಲ್ ಮಾಣಿ ಕೊಟ್ಟ ಸಲಹೆಯಿಂದ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಕ್ಲಿಕ್ ಆಯ್ತಂತೆ!

ಮಂಗಳವಾರ, 31 ಜನವರಿ 2017 (16:24 IST)
ಮುಂಬೈ: ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿದ್ದರೂ ಇನ್ನೂ ಅವರ ಬಗ್ಗೆ ಒಂದೊಂದು ರೋಚಕ ಕತೆಗಳು ಬರುತ್ತಲೇ ಇರುತ್ತವೆ. ಸ್ವತಃ ತೆಂಡುಲ್ಕರ್ ಇದೀಗ ಹೊಸತೊಂದು ರೋಚಕ ಕತೆ ಹೇಳಿದ್ದಾರೆ.

 
ಎಷ್ಟೋ ಜನರ ಪಾಲಿಗೆ ಆದರ್ಶವಾಗಿರುವ ಸಚಿನ್ ಒಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿದ್ದಾಗ ಹೋಟೆಲ್ ವೈಟರ್ ನೀಡಿದ ಸಲಹೆ ಅವರಿಗೆ ನೆರವಾಯಿತಂತೆ. ವಿಶಾಲ ಮನಸ್ಸಿದ್ದರೆ ಯಾರ ಸಲಹೆಯನ್ನಾದರೂ ಸ್ವೀಕರಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.

“ಒಂದು ದಿನ ಚೆನ್ನೈನ ಹೋಟೆಲ್ ಒಂದರಲ್ಲಿ ಕುಳಿತಿದ್ದೆ. ಅಲ್ಲಿದ್ದ ವೈಟರ್ ಹತ್ತಿರ ಬಂದು ‘ನೀವೇನೂ ತಿಳಿದುಕೊಳ್ಳದಿದ್ದರೆ ಒಂದು ಸಲಹೆ ಕೊಡುತ್ತೇನೆ’ ಎಂದ. ಆಯಿತು ಹೇಳಪ್ಪಾ ಎಂದೆ. ಅದಕ್ಕವನು ‘ನಿಮ್ಮ ಬ್ಯಾಟ್ ಬೀಸಲು ಮೊಣಕೈ ಕವಚ ಅಡ್ಡಿಯಾಗುತ್ತಿದೆ’ ಎಂದ. ಅವನು ಹೇಳಿದ್ದು ನೂರು ಶೇಕಡಾ ನಿಜವಾಗಿತ್ತು” ಎಂದು ತೆಂಡುಲ್ಕರ್ ವಿವರಿಸಿದ್ದಾರೆ.

ವೈಟರ್ ಸಲಹೆಯಂತೆ ಸಚಿನ್ ತಮ್ಮ ಮೊಣಕೈ ಕವಚವನ್ನು ಬದಲಾಯಿಸಿದರು. ಯಶಸ್ಸನ್ನೂ ಕಂಡರು. “ನಮ್ಮ ದೇಶದಲ್ಲಿ ಪಾನ್ ವಾಲಾನಿಂದ ಹಿಡಿದು ಸಿಇಒ ವರೆಗೂ ಎಲ್ಲರೂ ಸಲಹೆ ನೀಡುತ್ತಾರೆ. ಅದನ್ನು ಸ್ವೀಕರಿಸುವ ಮನಸ್ಸು ಬೇಕಷ್ಟೆ” ಎಂದು ಸಚಿನ್ ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ