ದ್ರಾವಿಡ್ ಗೇ ನೋಟಿಸ್ ಕೊಡ್ತೀರಾ? ಭಾರತೀಯ ಕ್ರಿಕೆಟ್ ನ್ನು ದೇವರೇ ಕಾಪಾಡಬೇಕು! ಬಿಸಿಸಿಐಗೆ ಗಂಗೂಲಿ ಲೇವಡಿ

ಗುರುವಾರ, 8 ಆಗಸ್ಟ್ 2019 (08:54 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಪ್ರಮುಖ ಕ್ರಿಕೆಟಿಗರು ಸ್ವ ಹಿತಾಸಕ್ತಿ ಸಂಘರ್ಷ ವಿವಾದಕ್ಕೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಪ್ರಮುಖ ಕ್ರಿಕೆಟಿಗರಿಗೆ ಬಿಸಿಸಿಐ ನೋಟಿಸ್ ಜಾರಿ ಮಾಡುತ್ತಿರುವುದು ಮಾಮೂಲಿಯಾಗಿದೆ.


ಇದರ ವಿರುದ್ಧ ಈಗ ಮಾಜಿ ನಾಯಕ ಸೌರವ್ ಗಂಗೂಲಿ ಸಿಡಿದೆದ್ದಿದ್ದಾರೆ. ಅದೂ ಭಾರತೀಯ ಕ್ರಿಕೆಟ್ ನ ಮೋಸ್ಟ್ ಜಂಟಲ್ ಮ್ಯಾನ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಈಗ ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ದ್ರಾವಿಡ್ ಗೂ ನೋಟಿಸ್ ನೀಡಿರುವುದಕ್ಕೆ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತೀಯ ಕ್ರಿಕೆಟ್ ನ ಹೊಸ ಫ್ಯಾಶನ್. ಸ್ವ ಹಿತಾಸಕ್ತಿ ಸಂಘರ್ಷ ಎಂಬುದು ಇತ್ತೀಚೆಗೆ ಸುದ್ದಿಯಲ್ಲಿರುವುದಕ್ಕೆ ಭಾರತೀಯ ಕ್ರಿಕೆಟ್ ನ ಫ್ಯಾಶನ್ ಆಗುತ್ತಿದೆ. ಭಾರತೀಯ ಕ್ರಿಕೆಟ್ ನ್ನು ದೇವರೇ ಕಾಪಾಡಬೇಕು. ಬಿಸಿಸಿಐ ರಾಹುಲ್ ದ್ರಾವಿಡ್ ಗೆ ಈಗ ನೋಟಿಸ್ ನೀಡಿದೆ’ ಎಂದು ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್ ಸಿಎ ಅಧ್ಯಕ್ಷರಾಗಿರುವ ದ್ರಾವಿಡ್ ಐಪಿಎಲ್ ನ ಸಿಎಸ್ ಕೆ ತಂಡದ ಮಾಲಿಕ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷ ಹುದ್ದೆ ಹೊಂದಿದ್ದಾರೆ ಎಂಬುದು ಆರೋಪ. ಬಿಸಿಸಿಐ ಕೋಚ್ ಅಥವಾ ಇತರ ಸಮಿತಿಗಳಲ್ಲಿರುವವರು ಖಾಸಗಿ ಸಂಸ್ಥೆಗಳಲ್ಲಿ ಹುದ್ದೆ ಹೊಂದುವಂತಿಲ್ಲ ಎಂಬುದು ನಿಯಮ. ಈಗ ದ್ರಾವಿಡ್ ಇಂಡಿಯಾ ಸಂಸ್ಥೆ ಉಪಾಧ್ಯಕ್ಷ ಎನ್ನುವುದರಿಂದ ಸ್ವ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ. ಆಗಸ್ಟ್ 16 ರೊಳಗಾಗಿ ದ್ರಾವಿಡ್ ನೋಟಿಸ್ ಗೆ ಉತ್ತರಿಸಬೇಕಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ