ದಂತ ಮುರಿದುಕೊಂಡ ಏಕದಂತ

WD
ಬಹುನಾಮ ಸಂಭೋಧಿತ ಸಿದ್ಧಿವಿನಾಯಕ, ವಿಘ್ನನಾಶಕ ಗಣಪ ತನ್ನ ದಂತ ಮುರಿದುಕೊಂಡು ಏಕದಂತನಾದ ಬಗ್ಗೆ ಆನೇಕ ಪುರಾಣ ಕತೆಗಳಿವೆ. ಬ್ರಹ್ಮಾಂಡ ಪುರಾಣದ ಪ್ರಕಾರ ಪರುಶರಾಮ ಮತ್ತು ಗಣೇಶನ ನಡುವೆ ನಡೆದ ಕದನದ ಸಂದರ್ಭದಲ್ಲಿ ಲಂಬೋದರನ ದಂತ ಮುರಿಯಿತೆಂಬ ಪ್ರತೀತಿ ಇದೆ.

ದುಷ್ಟ ಕ್ಷತ್ರಿಯರಿಗೆ ಪಾಠ ಕಲಿಸುತ್ತಿದ್ದ, ಶಿವದೇವರಿಂದ ಕೊಡಲಿ(ಪರಶು)ವನ್ನು ವರವಾಗಿ ಪಡೆದ ಶಿವಭಕ್ತ ಪರಶುರಾಮ ತನ್ನ ಇಷ್ಟ ದೇವನಿಗೆ ವಂದಿಸಲು ಕೈಲಾಸಕ್ಕೆ ತೆರಳಿದಾಗ ಬಾಗಿಲಲ್ಲಿ ನಿಂತಿದ್ದ ಗಜಾನನ ಶಿವನ ಅನುಮತಿ ಸಿಗುವವರೆಗೆ ಕಾಯುವಂತೆ ಹೇಳುತ್ತಾರೆ. ಆದರೆ ತಾನು ಶಿವನ ಭಕ್ತ ತನಗೆ ಅಂತಹ ನಿಬಂಧನೆಗಳು ಇರಕೂಡದು ಎಂದು ಪರಶುರಾಮ ಯೋಚಿಸಿ, ಒಳಗೆ ಹೋಗಗೊಡದ ವಿಘ್ನರಾಜನ ಮೇಲೆ ಕ್ರೋಧಿತರಾದ ಪರಶುರಾಮ ತಮ್ಮ ಕೊಡಲಿಯಿಂದ ಗಣೇಶನ ದಂತವನ್ನು ಹೊಡೆದು ತುಂಡರಿಸುತ್ತಾನೆ. ಅಷ್ಟರಲ್ಲಿ ಆಗಮಿಸಿದ ಶಿವ-ಪಾರ್ವತಿಯರು ಪರಶುರಾಮನ ಕೃತ್ಯ ಸರಿಯಲ್ಲವೆಂದು ತಿಳಿಸುತ್ತಾರೆ, ತನ್ನ ತಪ್ಪಿನ ಅರಿವಾದ ಪರಶುರಾಮ ಪಾರ್ವತಿಪುತ್ರನಿಗೆ ತಲೆಬಾಗಿ ಕ್ಷಮೆಕೋರಿ ಆತನ ಕೃಪಕಟಾಕ್ಷವನ್ನು ಪಡೆದುಕೊಳ್ಳುತ್ತಾನೆ. ಹೀಗಾಗಿ ಗಡಮುಖನಿಗೆ 'ಏಕದಂತ' ಎಂಬ ಹೆಸರು ಬಂದಿತು.

ಇನ್ನೊಂದು ಪುರಾಣ ಕತೆಯ ಪ್ರಕಾರ ಗಜಮುಖಾಸುರನ ಜೊತೆ ಕದನದ ವೇಳೆ ಗಣನಾಥ ಸ್ವತಃ ತನ್ನ ದಂತ ಮುರಿದುಕೊಂಡ ಎಂದು ತಿಳಿದುಬರುತ್ತದೆ. ಅಸುರ ಗುರು ಶುಕ್ರಚಾರ್ಯರ ಸಲಹೆಯಂತೆ ಶಿವನ ಕುರಿತು ಉಗ್ರ ತಪಗೈದ ರಾಕ್ಷಸ ಶಿವನನ್ನು ಒಲಿಸಿಕೊಂಡು ಅವರಿಂದ ಅದಮ್ಯ ಶಕ್ತಿಗಳನ್ನು ವರವಾಗಿ ಪಡೆದುಕೊಳ್ಳುತ್ತಾನೆ. ಆದರೆ ಆ ಶಕ್ತಿಯನ್ನು ದೇವತೆಗಳನ್ನು ಪೀಡಿಸಲು ದುರುಪಯೋಗಪಡಿಸಿಕೊಳ್ಳುತ್ತಾನೆ. ದೇವತೆಗಳು ಆದಿವಂದ್ಯರ ಬಳಿ ಸಹಾಯಕ್ಕಾಗಿ ಧಾವಿಸುತ್ತಾರೆ. ದೇವತೆಗಳ ಪ್ರಾರ್ಥನೆಯ ಮೇರೆಗೆ ದುಷ್ಟ ರಾಕ್ಷಸನೊಂದಿಗೆ ಗಜಕರ್ಣ ಯುದ್ಧಕ್ಕೆ ತೊಡಗಿದ. ಆದರೆ ವರಬಲ ಹೊಂದಿರುವ ದೈತ್ಯನನ್ನು ಸಾಮಾನ್ಯ ಯುದ್ಧದ ಮೂಲಕ ಸೋಲಿಸುವುದು ಸಾಧ್ಯವಿಲ್ಲ ಎಂದು ವಿದ್ಯಾಧಿದೇವನ ಅರಿವಿಗೆ ಬರುತ್ತದೆ. ಆಗ ತನ್ನ ದಂತವನ್ನು ಮುರಿದು ಅಸುರನ ಮೇಲೆ ಪ್ರಯೋಗಿಸಿ ರಕ್ಕಸನನ್ನು ಬಂಧಿಸಿ ಇಲಿಯಾಗಿ ಪರಿವರ್ತಿಸಿ ತನ್ನ ವಾಹನವಾಗಿಸಿಕೊಳ್ಳುತ್ತಾನೆ ಮತ್ತು ಈ ಮೂಲಕ ಮೂಷಕ ವಾಹನ ಭೂಷಿತರಾಗುತ್ತಾರೆ.

ವೆಬ್ದುನಿಯಾವನ್ನು ಓದಿ