ಜೆರುಸಲೇಮ್: 2023ರ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಯುವ ಮೂರು ವಾರಗಳ ಮುನ್ನ ಇಸ್ರೇಲ್ಗೆ ತೆರಳಿದ್ದ ನೇಪಾಳ ಕೃಷಿ ವಿದ್ಯಾರ್ಥಿ ಬಿಪಿನ್ ಜೋಶಿ ಸಾವನ್ನಪ್ಪಿರುವುದಾಗಿ ಹಮಾಸ್ ದೃಢಪಡಿಸಿದೆ.
ಅಮೆರಿಲದ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್ನಲ್ಲಿ ನಡೆದ ಶಾಂತಿ ಒಪ್ಪಂದದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಎರಡು ವರ್ಷಗಳ ಸುದೀರ್ಘ ಯುದ್ಧ ಅಂತ್ಯಗೊಂಡಿದೆ. ಹಮಾಸ್ನಲ್ಲಿ ಒತ್ತೆಯಾಳುಗಳಾಗಿದ್ದ ಎಲ್ಲರನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಒತ್ತೆಯಾಳು ಆಗಿದ್ದ ಬಿಪಿನ್ ಜೋಶಿ ಮೃತಪಟ್ಟ ವಿಷಯ ಖಚಿತಪಡಿಸಿದೆ.
ಮೃತದೇಹವನ್ನ ಇಸ್ರೇಲ್ಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಇಸ್ರೇಲ್ನಲ್ಲಿರುವ ನೇಪಾಳದ ರಾಯಭಾರಿ ಧನ ಪ್ರಸಾದ್ ಪಂಡಿತ್ ಮಾಹಿತಿ ನೀಡಿದ್ದಾರೆ. ಬಿಪಿನ್ ಜೋಶಿಯವರ ಮೃತದೇಹವನ್ನ ಹಮಾಸ್ ಇಸ್ರೇಲಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅದನ್ನು ಟೆಲ್ ಅವೀವ್ಗೆ ಕೊಂಡೊಯ್ಯಲಾಗುತ್ತಿದೆ ಎಂದಿದ್ದಾರೆ.
ನೂರಾರು ಕನಸ್ಸುಗಳನ್ನು ಹೊತ್ತು ಇಸ್ರೇಲ್ಗೆ ಗಾಜಾ ಗಡಿಯ ಬಳಿಯ ಕಿಬ್ಬುಟ್ಜ್ ಅಲುಮಿಮ್ನಲ್ಲಿ ಸುಧಾರಿತ ಕೃಷಿ ತಂತ್ರಗಳ ಅಧ್ಯಯನಕ್ಕೆ ತೆರಳಿದ್ದರು. ಆದರೆ ಅಕ್ಟೋಬರ್ 7, 2023 ರಂದು ಹಮಾಸ್ ದಕ್ಷಿಣ ಇಸ್ರೇಲ್ ನಡೆಸಿದ ಅನಿರೀಕ್ಷಿತ ದಾಳಿಯಿಂದಾಗಿ ವಿದ್ಯಾರ್ಥಿಗಳು ಬಾಂಬ್ ಶೆಲ್ಟರ್ನಲ್ಲಿ ಆಶ್ರಯ ಪಡೆದಿದ್ದರು.
ಆ ವೇಳೆ ಹಮಾಸ್ ಉಗ್ರರು ಇಸ್ರೇಲ್ನ ಕಿಬ್ಬುಟ್ಜ್ ಶೆಲ್ಟರ್ಗೆ ಗ್ರೆನೇಡ್ಗಳನ್ನು ಎಸೆದು ನುಗ್ಗಿದರು. ಅದರಲ್ಲಿ ಒಂದು ಗ್ರೆನೇಡ್ ಸ್ಫೋಟಿಸಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು, ಆದರೆ ಜೋಶಿ ತಕ್ಷಣವೇ ಕಾರ್ಯ ನಿರ್ವಹಿಸಿ, 2ನೇ ಗ್ರೆನೇಡ್ ಅನ್ನು ಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಹೊರಗೆ ಎಸೆದು ಜೀವಗಳನ್ನು ಉಳಿಸಿದರು ಎಂದು ಬದುಕುಳಿದ ನೇಪಾಳದ ಏಕೈಕ ವಿದ್ಯಾರ್ಥಿ ಹಿಮಾಂಚಲ್ ಕಟ್ಟೆಲ್ ಹೇಳಿದ್ದಾರೆ.
ನಂತರ ಅವರನ್ನು ಹಮಾಸ್ ಬಂದೂಕುಧಾರಿಗಳು ಸೆರೆ ಹಿಡಿದು ಗಾಜಾಗೆ ಕರೆದೊಯ್ದಿದ್ದರು.